ಭಾರತೀಯ ಸಮಾಜವು ತನ್ನ ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಬದಲಾವಣೆಯನ್ನು ಕಾಣದೇ ಸಾವಿರಾರು ವರ್ಷಗಳ ವರೆಗೆ ಹಾಗೇ ಉಳಿದುಕೊಂಡು ಬಂದಿದೆ ಎಂಬ ಅಭಿಪ್ರಾಯವು ಆಧುನಿಕ ವಿದ್ಯಾವಂತರಲ್ಲಿದೆ. ನಮ್ಮ ಇತಿಹಾಸ ಪುಸ್ತಕಗಳೂ ಅದನ್ನೇ ತಿಳಿಸುತ್ತವೆ. ಆದರೆ ಯಾವುದೇ ಸಮಾಜವಾದರೂ ಬದಲಾವಣೆಯಿಲ್ಲದೇ ಸಾವಿರಾರು ವರ್ಷ ಇದ್ದಹಾಗೇ ಉಳಿದುಕೊಂಡು ಬರುವುದು ಒಂದು ಅಸಾಧ್ಯವಾದ ಸಂಗತಿ. ಈ ಕಥೆಯು ಎಲ್ಲಿಂದ ಹುಟ್ಟಿಕೊಂಡಿತು ಹಾಗೂ ಹೇಗೆ ಗಟ್ಟಿಯಾಯಿತು ಎಂಬುದರ ಪರಿಚಯ ಇಲ್ಲಿದೆ.
ಭಾರತೀಯ ಸಮಾಜವು ಸಾವಿರಾರು ವರ್ಷಗಳಿಂದಲೂ ಯಾವುದೇ ಬದಲಾವಣೆಯನ್ನು ಕಾಣದೇ ಹಾಗೇ ಉಳಿದುಕೊಂಡು ಬಂದಿದೆ ಎಂಬುದೊಂದು ಹೇಳಿಕೆ ಪ್ರಚಲಿತದಲ್ಲಿ ಇದೆ. ಇದು ಮೂಲತಃ ವಸಾಹತು ಕಾಲದ ಪಾಶ್ಚಾತ್ಯ ಇತಿಹಾಸಕಾರರು ಹಾಗೂ ಚಿಂತಕರು ಕಟ್ಟಿಕೊಟ್ಟ ಚಿತ್ರಣವಾಗಿದೆ. ಅಂದರೆ ಈ ಸಮಾಜವು ಕಾಲಕ್ಕೆ ತಕ್ಕಂತೆ ವಿಕಾಸವನ್ನು ಹಾಗೂ ಪ್ರಗತಿಯನ್ನು ಹೊಂದಿಲ್ಲ. ಅದೇ ಈ ಸಮಾಜವು ಹಿಂದುಳಿಯಲಿಕ್ಕೆ ಮೂಲ ಕಾರಣ. ಅದೇ ಈ ಸಮಾಜದ ಬರ್ಬರತೆಗೆ ಸಾಕ್ಷಿ. ಭಾರತದ ಈ ಜಡತೆಯನ್ನು ನಿವಾರಿಸಿ ಅದನ್ನು ಪ್ರಗತಿಪಥಕ್ಕೆ ಹಚ್ಚುವುದೇ ಬ್ರಿಟಿಷ್ ವಸಾಹತು ಆಳ್ವಿಕೆಯ ಅಂತಿಮ ಧ್ಯೇಯವಾಯಿತು. ಇಂದು ವಸಾಹತು ಆಳ್ವಿಕೆಯನ್ನು ಬೇರೆ ಕಾರಣಗಳಿಗಾಗಿ ಟೀಕಿಸುವವರೂ ಕೂಡ ಈ ಕಾರಣಕ್ಕಾಗಿ ಅದನ್ನು ಸಮರ್ಥಿಸಲು ಮರೆಯುವುದಿಲ್ಲ.
ಭಾರತೀಯ ಸಮಾಜದ ಕುರಿತು ಇಂದು ಭಾರತೀಯ ವಿದ್ವಾಂಸರು ನಂಬಿಕೊಂಡು ಬಂದ ಚಿತ್ರಣಗಳೂ ಕೂಡ ನೇರವಾಗಿ ಈ ಕಥೆಯನ್ನು ಹೇಳದಿರಬಹುದು ಆದರೆ ಅವು ಅದನ್ನೇ ಸೂಚಿಸುತ್ತವೆ. ಒಂದು ಉದಾಹರಣೆಯನ್ನು ಕೊಡಬಹುದಾದರೆ, ನಮ್ಮ ಸಮಾಜದ ಕುರಿತು ನಾವು ನಂಬಿಕೊಂಡ ಚಿತ್ರಣದ ಪ್ರಕಾರ ವೇದಕಾಲದಲ್ಲೇ ಈ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬುದಾಗಿ ವಿಭಾಗಿಸಲಾಯಿತು. ನಂತರ ಎಷ್ಟೆಷ್ಟೋ ಸುಧಾರಕರು ಹಾಗೂ ಚಳವಳಿಗಳು ಆಗಿ ಹೋದರೂ ಕೂಡ ಆ ವ್ಯವಸ್ಥೆಯು ಭಾರತದ ನದಿ ಪರ್ವತಗಳಂತೇ ಅಚಲವಾಗಿ ನಿಂತಿದೆ. ಇದಕ್ಕೆ ಸಾಕ್ಷಿಯಾಗಿ ಯಾವುದೇ ಇತಿಹಾಸ ಪುಸ್ತಕವನ್ನಾದರೂ ತೆಗೆದು ನೋಡಿ: ಅಲ್ಲಿ ಸಾವಿರಾರು ವರ್ಷಗಳ ವರೆಗೆ ರಾಜಕೀಯವಾಗಿ ಅನೇಕ ರಾಜಮನೆತನಗಳ ಆಳ್ವಿಕೆ ಆಗಿಹೋಗಿದೆ, ಈ ಎಲ್ಲ ಆಳ್ವಿಕೆಗಳಲ್ಲೂ ನಮ್ಮ ಸಮಾಜವು ಮಾತ್ರ ಬ್ರಾಹ್ಮಣ, ಕ್ಷತ್ರಿಯ, ಇತ್ಯಾದಿಯಾಗಿಯೇ ವಿಭಾಗಿಸಲ್ಪಟ್ಟಿತ್ತು ಎಂಬ ವರ್ಣನೆಗಳೇ ಇರುತ್ತವೆ.
ಹಿಂದೂ ರಾಜರ ಕಥೆ ಬಿಟ್ಟುಬಿಡಿ. ಎಷ್ಟೆಂದರೂ ಅವರು ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಮನುಸ್ಮೃತಿ ಎಂಬ ಸಂವಿಧಾನಕ್ಕೆ ಬದ್ಧರಾಗಿದ್ದರು ಎಂದೇ ನಂಬಲಾಗಿದೆ. ಆದರೆ ಮುಸ್ಲಿಂ ರಾಜರೂ ಇಲ್ಲಿ ಸಾವಿರಾರು ವರ್ಷ ಆಳಿದರು. ಅವರ ಕಾಲದಲ್ಲೂ ಹಿಂದೂ ಸಮಾಜವನ್ನು ಬ್ರಾಹ್ಮಣ ಕ್ಷತ್ರಿಯ, ಇತ್ಯಾದಿಯಾಗೇ ವಿಭಾಗಿಸಿದ್ದರು ಎಂದು ಇತಿಹಾಸ ಪುಸ್ತಕಗಳು ತಿಳಿಸುತ್ತವೆ. ಅದೂ ಹೋಗಲಿ, ಕಳೆದ ಇನ್ನೂರೈವತ್ತು ವರ್ಷಗಳಿಂದೀಚೆಗೆ ಬ್ರಿಟಿಷರು ಹಾಗೂ ನಮ್ಮವರೇ ಈ ದೇಶವನ್ನು ಆಳಿದ್ದಾರೆ. ಆದರೂ ಸಮಾಜ ಮಾತ್ರ ಹಾಗೇ ಇದೆ ಎಂಬುದು ಸುಧಾರಣಾವಾದಿಗಳ ಗೋಳಾಟ. ಅದರಲ್ಲೂ ನೆಹರೂ ಕಾಲದ ನಂತರವಂತೂ ಭಾರತೀಯ ಸಂಪ್ರದಾಯಸ್ಥರ ಜುಟ್ಟು ಪ್ರಗತಿವಾದಿಗಳ ಕೈಗೇ ಬಂದಿದೆ. ಕಳೆದ ಅರುವತ್ತಕ್ಕೂ ಹೆಚ್ಚು ವರ್ಷ ಕಾಯ್ದೆ-ಕಾನೂನು, ಆಳ್ವಿಕೆ, ಎಲ್ಲವೂ ಅವರ ಇಚ್ಛೆಗನುಗುಣವಾಗಿಯೇ ಇದೆ. ಆದರೂ ಇಂದು ಕೂಡ ನಮ್ಮ ಸಮಾಜವನ್ನು ಆಳುವುದು ಜಾತಿವ್ಯವಸ್ಥೆಯೇ ಎಂಬುದಾಗಿ ಇವರೆಲ್ಲ ಒಕ್ಕೊರಲಿನಿಂದ ಗೋಳಾಡುತ್ತಿದ್ದಾರೆ. ಇದು ಈ ಮುಸ್ಲಿಂ, ಬ್ರಿಟಿಷ್ ರಾಜರ ಹಾಗೂ ಸ್ವತಂತ್ರ ಭಾರತದ ರಾಜಕಾರಣಿಗಳ ಹಾಗೂ ಪ್ರಗತಿಪರ ಚಿಂತಕರ ಆಲಸ್ಯತನವನ್ನು ತೋರಿಸುತ್ತದೆಯೋ, ಇಲ್ಲ, ಜಾತಿ ವ್ಯವಸ್ಥೆಯ ಗಟ್ಟಿತನವನ್ನು ತೋರಿಸುತ್ತದೆಯೋ, ಒಟ್ಟಿನಲ್ಲಿ ನಮ್ಮ ಸಮಾಜವು ನಿಂತ ನೀರಿನ ಹಾಗೇ ಚೂರೂ ಕೊಂಕದೇ ಹಾಗೇ ಉಳಿದು ಕೊಂಡು ಬಂದಿತು ಎಂಬುದಾಗಿ ಭಾರತೀಯ ಇತಿಹಾಸವು ನಮಗೆಲ್ಲ ತಿಳಿಸುತ್ತದೆ.
ಇದು ಭಾರತೀಯ ಸಮಾಜದ ಕುರಿತು ನಕಾರಾತ್ಮಕವಾಗಿ ನೋಡುವವರ ಹಾಗೂ ನಮ್ಮ ಸಂಸ್ಕೃತಿಯ ಕಟು ವಿಮರ್ಶಕರ ಇತಿಹಾಸವೊಂದೇ ಅಲ್ಲ. ಈ ಸಂಸ್ಕೃತಿಯ ಆರಾಧಕರೆಂಬುದಾಗಿ ಕರೆದುಕೊಳ್ಳುವವರ ಇತಿಹಾಸವೂ ಇದೇ ಅಗಿದೆ. ನಮ್ಮ ಸಂಸ್ಕೃತಿಯ ಇಂಥ ಉತ್ತಮ ವ್ಯವಸ್ಥೆಯು ವೇದಕಾಲದಲ್ಲೇ ಸೃಷ್ಟಿಯಾಯಿತು ಹಾಗೂ ತದನಂತರ ಅದು ಹಾಗೇ ಉಳಿದುಕೊಂಡು ಬಂದಿತು. ಸಾವಿರಾರು ವರ್ಷಗಳಲ್ಲಿ ಆಗಿಹೋದ ಎಲ್ಲಾ ಮಹಾತ್ಮರೂ ಕೂಡ ಅದನ್ನೇ ಎತ್ತಿಹಿಡಿಯುತ್ತ ಬಂದರು. ಇದೇ ನಮ್ಮ ಸಂಸ್ಕೃತಿಯ ಹೆಚ್ಚುಗಾರಿಕೆ ಎಂಬುದು ಅವರ ಅಭಿಮತವಾಗಿದೆ.
ನಮ್ಮ ಇತಿಹಾಸ ಹಾಗೂ ಸಮಾಜದ ಕುರಿತು ಹೊಸದಾಗಿ ಸಂಶೋಧನೆ ನಡೆಸುವವರು ಕಂಡುಕೊಳ್ಳುವ ಸತ್ಯವೂ ಇದೇ ಆಗಿದೆ. ಇಂದು ವಿಶ್ವವಿದ್ಯಾನಿಲಯಗಳಲ್ಲಿ ಭಾರತೀಯ ಸಾಮಾಜಿಕ ಇತಿಹಾಸದ ಕುರಿತು ರಚಿಸಿದ ಯಾವುದೇ ಸಂಶೋಧನಾ ಪ್ರಬಂಧಗಳ ಮೇಲೆ ಕಣ್ಣಾಡಿಸಿ, ಅವುಗಳಲ್ಲೂ ಕೂಡ ಭಾರತೀಯ ಸಮಾಜವು ಇತಿಹಾಸ ಕಾಲದುದ್ದಕ್ಕೂ ನಾಲ್ಕು ವರ್ಣಗಳಾಗಿಯೇ ವಿಭಾಗವಾಗಿರುತ್ತದೆ. ಅದಕ್ಕಿಂತ ನಾವು ಕಂಡುಕೊಳ್ಳತಕ್ಕ ಸತ್ಯವು ಇದೇ ಆಗಿರಲೇಬೇಕು ಎಂಬ ಒತ್ತಾಯವೂ ವಿದ್ವಾಂಸರ ಮೇಲಿದೆ. ಈ ಕುರಿತು ಯಾವುದೇ ಅಪಸ್ವರ ಏಳದಂತೇ ನೋಡಿಕೊಳ್ಳುವುದು ತಮ್ಮ ನೈತಿಕ ಹೊಣೆಗಾರಿಕೆ ಎಂಬುದಾಗಿ ಕೆಲವು ಬುದ್ಧಿಜೀವಿಗಳು ಭಾವಿಸಿದ್ದಾರೆ. ಇದನ್ನು ಗಮನಿಸಿದರೆ ಭಾರತೀಯರಿಗೆ ತಮ್ಮ ಸಮಾಜವು ಸಾವಿರಾರು ವರ್ಷ ಒಂದೇ ರೀತಿಯಲ್ಲಿ ಉಳಿದುಕೊಂಡು ಬಂದಿತು ಎಂಬ ವಿಚಾರವೊಂದು ಪ್ರಯೋಜನಕಾರಿಯಾದ ಅಥವಾ ಅಭಿಮಾನದ ವಿಷಯವಾಗಿರುವಂತೇ ಕಾಣುತ್ತದೆ. ಆದರೆ ಪ್ರಪಂಚದ ಬೇರೆ ಯಾವುದಾದರೂ ಸಮಾಜದಲ್ಲಿ ಇಂಥ ವ್ಯವಸ್ಥೆಯೊಂದು ಸಾವಿರಾರು ವರ್ಷ ಉಳಿದುಕೊಂಡು ಬಂದ ಉದಾಹರಣೆ ನಮಗೆ ಸಿಗುವುದಿಲ್ಲ. ಅಥವಾ ಸಾಮಾಜಿಕ ವ್ಯವಸ್ಥೆಯೊಂದು ಬದಲಾಗದೇ ಹಾಗೇ ಸಾವಿರಾರು ವರ್ಷಗಳ ವರೆಗೆ ಉಳಿದುಕೊಂಡು ಬರುವ ಸಂಗತಿಯು ನಮ್ಮ ಅನುಭವಕ್ಕೂ, ಸಮಾಜ ಶಾಸ್ತ್ರೀಯ ಜ್ಞಾನಕ್ಕೂ ಅಸಂಗತವೆನ್ನಿಸುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಭಾರತದಂತಹ ವೈವಿಧ್ಯಪೂರ್ಣ ಸಮಾಜವು ಬದಲಾಗಿದೆ ಅಥವಾ ಇಲ್ಲ ಎಂಬುದಕ್ಕೆ ಮಾನದಂಡಗಳಾವವು ಎಂಬುದೂ ನಮಗೆ ತಿಳಿದಿಲ್ಲ. ಈ ಹೇಳಿಕೆಯನ್ನು ನಂಬಲು ಇಷ್ಟೊಂದು ತೊಡಕುಗಳಿದ್ದರೂ ವಿದ್ವಾಂಸರಿಗೇಕೆ ಇದೇ ಸತ್ಯವೆಂಬ ನಂಬಿಕೆ ಹುಟ್ಟಿತು?
ಭಾರತೀಯರು ತಮ್ಮ ಸಮಾಜದ ಕುರಿತು ಏನನ್ನು ಚಿತ್ರಿಸಿಕೊಳ್ಳುತ್ತಾರೋ ಅದು ವಸಾಹತು ಕಾಲದ ಬಳುವಳಿ ಎಂಬುದಾಗಿ ಸಬೂಬು ಹೇಳಬಹುದು. ವಸಾಹತು ದೊರೆಗಳಿಗೆ ಭಾರತವನ್ನು ಹಿಂದುಳಿದ ಸಮಾಜವೆಂಬಂತೇ ಚಿತ್ರಿಸುವುದು ಪ್ರಯೋಜನಕಾರಿಯಾಗಿತ್ತು ಎಂದೂ ದೂರಬಹುದು. ಆದರೆ ವಸಾಹತು ಆಳ್ವಿಕೆಗೆ ಸಂಬಂಧವೇ ಇಲ್ಲದ ಪಾಶ್ಚಾತ್ಯ ವಿದ್ವಾಂಸರಿಗೇಕೆ ಹಾಗನ್ನಿಸಬೇಕು? ಉದಾಹರಣೆಗೆ ಯುರೋಪಿನ ಜ್ಞಾನೋದಯ ಯುಗದ ಚಿಂತಕರೇ ಈ ಅಭಿಪ್ರಾಯವನ್ನು ಹುಟ್ಟುಹಾಕಿದವರು. ಜ್ಞಾನೋದಯ ಚಿಂತನೆಯ ತವರು ಪ್ಯಾರೀಸು. ನಂತರ ಈ ಚಿತ್ರಣಗಳನ್ನು ಮತ್ತಷ್ಟು ಗಟ್ಟಿ ಮಾಡಿದವರು ಜರ್ಮನಿಯ ರೋಮಾಂಟಿಸಿಸ್ಟ್ ಚಿಂತಕರು. ಬ್ರಿಟಿಷ್ ಇತಿಹಾಸಕಾರರು ಇವರ ಅಭಿಪ್ರಾಯಗಳನ್ನೇ ಭಾರತೀಯ ಇತಿಹಾಸಕ್ಕೆ ಆರೋಪಿಸಿದರು. ಅವರಲ್ಲಿ ಬಹಳಷ್ಟು ಜನರು ಭಾರತವನ್ನೇ ನೋಡಿರಲಿಲ್ಲ, ಅದರ ಕುರಿತು ನಿಖರವಾದ ಮಾಹಿತಿಯೂ ಅವರಿಗೆ ಇರಲಿಲ್ಲ. ಅವರು ತಮ್ಮ ಆರಾಮ ಖುರ್ಚಿಯಲ್ಲಿ ಕುಳಿತುಕೊಂಡೇ ಈ ಸತ್ಯವನ್ನು ಕಂಡುಕೊಂಡರು. ಹಾಗಾದರೆ ಈ ಜ್ಞಾನೋದಯವು ಹೇಗೆ ಮತ್ತು ಏಕೆ ಆಯಿತು?
ಈ ಮೇಲಿನ ಪ್ರಶ್ನೆಗೆ ಉತ್ತರವನ್ನು ಪಾಶ್ಚಾತ್ಯ ಇತಿಹಾಸದಲ್ಲೇ ಹುಡುಕಬೇಕಾಗುತ್ತದೆ. ರಿಲಿಜನ್ನಿನ ಕುರಿತ ಆಧುನಿಕ ಚಿಂತನೆಗಳು ಯುರೋಪಿನಲ್ಲಿ ರೂಪುಗೊಂಡಂತೇ ಅದನ್ನಾಧರಿಸಿ ಇಂಥ ಅಭಿಪ್ರಾಯಗಳೂ ರೂಪುಗೊಂಡವು. ಇದು ಕ್ರಿಶ್ಚಿಯಾನಿಟಿಯಲ್ಲಿ ಪೇಗನ್ನರ ಕುರಿತ ಚಿತ್ರಣಗಳನ್ನು ಆಧಾರವಾಗಿಟ್ಟುಕೊಂಡು ಜ್ಞಾನೋದಯ ಯುಗದ ಚಿಂತಕರು ಹುಟ್ಟುಹಾಕಿದ ಪ್ರತಿಪಾದನೆಯಾಗಿದೆ. ಪ್ರೊಟೆಸ್ಟಾಂಟಿಸಂನ ಉಗಮದೊಂದಿಗೆ ಸತ್ಯವಾದ ರಿಲಿಜನ್ನು ಹಾಗೂ ಸುಳ್ಳು ರಿಲಿಜನ್ನುಗಳ ಕುರಿತ ಚರ್ಚೆಯು ಯುರೋಪಿನಲ್ಲಿ ಪ್ರಧಾನವಾಯಿತು. ರಿಲಿಜನ್ನು ಮೂಲತಃ ಶುದ್ಧವಾಗಿದ್ದರೂ ನಂತರ ಅದರ ಅನುಯಾಯಿಗಳು ದೈವವಾಣಿಯನ್ನು ಮರೆಯುವುದರಿಂದ ಅದು ಭ್ರಷ್ಟವಾಗುತ್ತ ಹೋಗುತ್ತದೆ, ಹಾಗಾಗಿ ಅದು ಸುಧಾರಣೆಗೊಳಪಡುತ್ತ ಇರಬೇಕಾಗುತ್ತದೆ ಎಂಬುದು ಪ್ರೊಟೆಸ್ಟಾಂಟರ ವಾದ. ಈ ಭ್ರಷ್ಟತೆಯನ್ನು ಹೇಗೆ ಅಳೆಯಬೇಕು? ಈ ಪ್ರಶ್ನೆಯನ್ನು ಉತ್ತರಿಸುವ ಸಲುವಾಗಿ ಪೇಗನ್ನರ ಆಚಾರಗಳನ್ನು ಭ್ರಷ್ಟ ರಿಲಿಜನ್ನಿಗೆ ಪ್ರಮಾಣವನ್ನಾಗಿ ತರಲಾಯಿತು. ಪ್ರಾಚೀನ ರೋಮನ್ನರನ್ನು ಪೇಗನ್ನರೆಂಬುದಾಗಿ ಕ್ರೈಸ್ತರು ಕರೆಯುತ್ತಿದ್ದರು. ರೋಮನ್ನರು ವಿಗ್ರಹಾರಾಧಕರಾಗಿದ್ದರು. ಮಧ್ಯಕಾಲದಲ್ಲಿ ಪೇಗನಿಸಂ ಸುಳ್ಳು ರಿಲಿಜನ್ನಿಗೆ ಮತ್ತೊಂದು ಹೆಸರಾಯಿತು ಹಾಗೂ ಐಡೋಲೇಟ್ರಿಯ ಕುರಿತು ಕ್ರೈಸ್ತ ಥಿಯಾಲಜಿಯಲ್ಲಿ ನಿರೂಪಣೆಗಳು ಬೆಳೆದವು. ಐಡೋಲೇಟ್ರಿಯು ಡೆವಿಲ್ಲನ ಮೋಸವಾಗಿದೆ ಹಾಗೂ ಆ ಕಾರಣದಿಂದ ಪಾಪ ಹಾಗೂ ಅನೈತಿಕ ಕಾರ್ಯವಾಗಿದೆ ಎಂಬ ನಂಬಿಕೆ ಕ್ರೈಸ್ತರಲ್ಲಿ ಗಟ್ಟಿಯಾಯಿತು. ಕ್ಯಾಥೋಲಿಕರೂ ಕೂಡ ಈ ಐಡೋಲೇಟ್ರಿಯನ್ನು ಅಳವಡಿಸಿಕೊಂಡು ಭ್ರಷ್ಟರಾಗಿದ್ದಾರೆ ಎಂಬುದಾಗಿ ಪ್ರೊಟೆಸ್ಟಾಂಟರು ಆರೋಪಿಸಿದರು.
ಪ್ರೊಟೆಸ್ಟಾಂಟ್ ಪ್ರತಿಪಾದನೆಗಳು ಯುರೋಪಿನಲ್ಲಿ ಸಾಮಾನ್ಯಜ್ಞಾನವಾಗಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಯುರೋಪಿನ ಪ್ರವಾಸಿಗರು ಭಾರತ, ಚೀನಾ ಇತ್ಯಾದಿ ದೇಶಗಳ ಸಂಸ್ಕೃತಿಯನ್ನು ಕಂಡರು. ಈ ಜನರು ಅವರಿಗೆ ಥಿಯಾಲಜಿಯ ಪೇಗನ್ನರಂತೇ ಕಂಡರು. ಇವರನ್ನೂ ಕೂಡ ಸಾಂಸ್ಕೃತಿಕವಾಗಿ ಪ್ರಾಚೀನ ಪೇಗನ್ನರಿಗೇ ಸಮೀಕರಿಸಲಾಯಿತು. ಅಂದರೆ ಇವರೂ ಐಡೋಲೇಟರ್ಗಳಾಗಿದ್ದು ಪತಿತರಾಗಿದ್ದಾರೆ ಎಂದು ಭಾವಿಸಿ ಇವರನ್ನು ಹೀದನ್ನರು ಎಂಬುದಾಗಿ ಕರೆದರು. ಅಂದಿನವರ ಪ್ರವಾಸೀ ಕಥನಗಳಲ್ಲಿ ಭಾರತೀಯರ ಅನೈತಿಕ ಆಚರಣೆಗಳು, ಭ್ರಷ್ಟತೆ, ಅಮಾನವೀಯ ಪದ್ಧತಿಗಳು, ಮೌಢ್ಯ ಇತ್ಯಾದಿಗಳನ್ನು ಅತಿಶಯೋಕ್ತಿಮಾಡಿ ಬಣ್ಣಿಸಲಾಯಿತು. ಅಂದರೆ ಹೀದನ್ ಸಂಸ್ಕೃತಿಯೊಂದು ಐರೋಪ್ಯ ಕಲ್ಪನೆಗೆ ಹೇಗಿರಬೇಕೋ ಹಾಗೇ ಚಿತ್ರಣಗಳು ರೂಪುಗೊಂಡವು. ಐರೋಪ್ಯರಿಗೆ ಪ್ರಪಂಚದ ಇತರ ಹೀದನ್ ಜನರ ಕುರಿತೂ ಇಂಥ ವರ್ಣರಂಜಿತ ಕಥನಗಳು ಲಭ್ಯವಾದವು. ಅಂದರೆ ಪೇಗನಿಸಂ ಎಂಬ ಒಂದು ವಿಲಕ್ಷಣ ಮೃಗವು ಪ್ರಪಂಚದಾದ್ಯಂತ ತನ್ನ ಅಸ್ತಿತ್ವವನ್ನು ತಳೆಯಿತು.
ಭಾರತದ ಕುರಿತು ಜ್ಞಾನೋದಯ ಯುಗದ ಸೆಕ್ಯುಲರ್ ಚಿಂತನೆಗಳು ಇಂತಹ ಚಿತ್ರಣಗಳನ್ನು ಆಧರಿಸಿ ರೂಪುಗೊಂಡವು. ಸೆಕ್ಯುಲರ್ ಚಿಂತಕರಿಗೆ ಪ್ರಪಂಚದ ಜನರ ಕುರಿತು ಒಂದು ಸ್ಥೂಲ ಚಿತ್ರಣವು ಇದರಿಂದ ಲಭ್ಯವಾಯಿತು. ಅದರ ಪ್ರಕಾರ ಈ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅನಾಗರಿಕತೆಯ ವಿಭಿನ್ನ ಹಂತಗಳಲ್ಲಿರುವ ಜನರು ವಾಸಿಸುತ್ತಿದ್ದಾರೆ. ಅವರ ನಡಾವಳಿಗಳು ವಿಲಕ್ಷಣವಾಗಿಯೂ, ವಿಕೃತವಾಗಿಯೂ ಇವೆ ಹಾಗೂ ಅವರಲ್ಲಿ ನೈತಿಕತೆ ಹಾಗೂ ಮಾನವೀಯತೆಗಳು ವಿಕಾಸದ ವಿಭಿನ್ನ ಹಂತಗಳಲ್ಲಿವೆ. ಅವರು ತಮ್ಮ ಈ ಜ್ಞಾನವನ್ನೇ ಆಧರಿಸಿ ಸಮಾಜಜ್ಞಾನಕ್ಕೆ ಬುನಾದಿಯನ್ನು ಹಾಕಿದರು. ಈ ಸಮಾಜಜ್ಞಾನದಲ್ಲಿ ಎರಡು ಅಂಶಗಳು ನಿರ್ಣಾಯಕವಾಗಿವೆ: ೧. ಈ ಎಲ್ಲಾ ಸಂಸ್ಕೃತಿಗಳ ಇತಿಹಾಸವೂ ಕೂಡ ಏಕೈಕ ಮನುಕುಲದ ಪ್ರಗತಿಯ ಕಥೆಯಾಗಿದೆ. ೨. ಆ ಮನುಕುಲದಲ್ಲಿ ವಿಕಾಸದ ವಿಭಿನ್ನ ಹಂತಗಳಲ್ಲಿರುವ ಸಂಸ್ಕೃತಿಗಳಿವೆ. ಆದಿಮ ಜನರು ಅತ್ಯಂತ ಬರ್ಬರರಾಗಿದ್ದು ಅತ್ಯಂತ ಕೆಳಹಂತದಲ್ಲಿದ್ದರೆ, ಪೇಗನ್ನರು ಅವರಿಗಿಂತ ಮೇಲಿದ್ದಾರೆ. ಅವರಿಗಿಂತಲೂ ಮೇಲೆ ರಿಲಿಜನ್ನಿನ ಪರಿಪೂರ್ಣ ಕಲ್ಪನೆಯನ್ನು ಪಡೆದವರು ಹಾಗೂ ಎಲ್ಲರಿಗಿಂತ ಎತ್ತರದಲ್ಲಿ ಸೆಕ್ಯುಲರ್ ಜ್ಞಾನೋದಯವನ್ನು ಕಂಡ ಐರೋಪ್ಯರಿದ್ದಾರೆ.
ಜ್ಞಾನೋದಯ ಯುಗದ ಚಿಂತಕರು ಈ ಮೇಲಿನ ಮನುಕುಲದ ವಿಕಾಸದ ಕುರಿತ ಕಥೆಯನ್ನು ರೂಪಿಸುವಾಗ ರಿಲಿಜನ್ನು ಸಾರ್ವತ್ರಿಕವಾದ ಸಂಗತಿ ಎಂಬುದಾಗಿ ಭಾವಿಸಿ ಮನುಕುಲದ ಪ್ರಗತಿಯನ್ನು ಅದಕ್ಕೆ ತಳುಕುಹಾಕಿದರು. ರಿಲಿಜನ್ನಿನ ಕುರಿತು ಸೆಕ್ಯುಲರ್ ಚಿತ್ರಣದ ಪ್ರಕಾರ ಮಾನವನು ಸೆಮೆಟಿಕ್ ರಿಲಿಜನ್ನಿನಂಥ ರಿಲಿಜನ್ನನ್ನು ಕಲ್ಪಿಸಿಕೊಳ್ಳುವ ಹಂತವು ಅವನ ಬೌದ್ಧಿಕ ವಿಕಾಸದಲ್ಲಿ ಮೇಲಿನ ಹಂತವಾಗಿದೆ. ಏಕೆಂದರೆ ಈ ರಿಲಿಜನ್ನುಗಳಲ್ಲಿ ಮಾನವನು ಈ ವಿಶ್ವದ ಹಿಂದಿರಬಹುದಾದ ಅಗೋಚರವಾದ ಒಂದು ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುತ್ತಾನೆ ಹಾಗೂ ಈ ವ್ಯವಸ್ಥೆಯ ಹಿಂದಿನ ನಿಯಮವನ್ನೂ ಅದಕ್ಕೆ ಕಾರಣೀಭೂತವಾದ ಶಕ್ತಿಯನ್ನೂ ಕಲ್ಪಿಸಿಕೊಳ್ಳುತ್ತಾನೆ. ಈ ರೀತಿಯ ಕಲ್ಪನೆಯನ್ನು ಅಮೂರ್ತ (ಅಬ್ಸ್ಟ್ರಾಕ್ಟ್) ಚಿಂತನೆ ಎಂಬುದಾಗಿ ಗುರುತಿಸಲಾಯಿತು. ಹಾಗೂ ರಿಲಿಜನ್ನಿನ ಮೂಲಕ ವಿಶ್ವದ ಕುರಿತು ನೀಡಿದ ವಿವರಣೆಯನ್ನು ವೈಜ್ಞಾನಿಕ ವಿವರಣೆಯನ್ನು ಹೊಂದುವ ಹಂಬಲವೆಂಬುದಾಗಿ ಗುರುತಿಸಲಾಯಿತು. ಈ ಅಮೂರ್ತ ವ್ಯವಸ್ಥೆಯನ್ನು ಕುರಿತು ವೈಜ್ಞಾನಿಕವಾಗಿ ಚಿಂತಿಸಲು ನಿಜವಾಗಿಯೂ ಸಮರ್ಥರಾದ ಆಧುನಿಕ ಪಾಶ್ಚಾತ್ಯ ಚಿಂತಕರೇ ಮನುಕುಲದ ಪ್ರೌಢಾವಸ್ಥೆಯನ್ನು ತಲುಪಿದ ಸದಸ್ಯರಾಗಿದ್ದಾರೆ. ಈ ಅಮೂರ್ತ ವ್ಯವಸ್ಥೆಯನ್ನು ಕಲ್ಪಿಸುವ ಹಂತಕ್ಕೇ ಏರದ ಜನರು ಮಾನಸಿಕವಾಗಿ ಇನ್ನೂ ಬೆಳವಣಿಗೆ ಹೊಂದದವರು ಎಂಬ ತೀರ್ಮಾನಕ್ಕೆ ಬರಲಾಯಿತು.
ಈ ವಿವರಣೆಯು ರಿಲಿಜನ್ನಿನ ವಿಕಾಸದ ಇತಿಹಾಸವನ್ನೂ ರೂಪಿಸಿತು. ಆದಿಮ ಮಾನವರು ನಿಸರ್ಗದ ಸಂಗತಿಗಳನ್ನು ಮೂರ್ತರೂಪದಲ್ಲಿ ನೇರವಾಗಿ ಆರಾಧಿಸುತ್ತಿದ್ದರು. ನಂತರದ ಹಂತದಲ್ಲಿ ಈ ನೈಸರ್ಗಿಕ ಸಂಗತಿಗಳಿಗೆ ದೈವೀ ರೂಪವನ್ನು ನೀಡಿದರು. ನಂತರ ಈ ವಿಕಾಸದ ಅತ್ಯುಚ್ಛ ಹಂತವಾಗಿ ಈ ನಿಸರ್ಗದ ಹಿಂದೆ ಕಾರಣ ಶಕ್ತಿಯಾಗಿ ಏಕಮಾತ್ರ ದೇವನನ್ನು ಹಾಗೂ ಆತನ ನಿಯಮಗಳನ್ನೂ ಕಲ್ಪಿಸಿದರು. ಈ ತರ್ಕದ ಮೂಲಕ ಭಾರತೀಯರನ್ನು ಅರ್ಥೈಸಿದ ಈ ಚಿಂತಕರು ಭಾರತೀಯರು ಸಸ್ಯ, ಪ್ರಾಣಿ, ನದಿ ಇತ್ಯಾದಿಗಳಿಗೆ ದೈವತ್ವವನ್ನು ಆರೋಪಿಸಿ ಪೂಜಿಸುವ ಕಾರಣದಿಂದ ಅವರಲ್ಲಿ ಅಮೂರ್ತ ಚಿಂತನಾಶಕ್ತಿಯು ವಿಕಾಸಹೊಂದಿಲ್ಲ ಎಂಬ ನಿರ್ಣಯಕ್ಕೆ ಬಂದರು. ಇಲ್ಲಿನ ಇತಿಹಾಸ-ಪುರಾಣಗಳನ್ನು ಗಮನಿಸಿದ ಚಿಂತಕರು ಭಾರತೀಯರಿಗೆ ಪ್ರೌಢವಾಗಿ ಯೋಚಿಸುವ ಸಾಮರ್ಥ್ಯವೇ ಇಲ್ಲದಿರುವುದರಿಂದ ಸತ್ಯ-ಸುಳ್ಳುಗಳ, ಕನಸು-ವಾಸ್ತವಗಳ ತಾರತಮ್ಯಜ್ಞಾನವೇ ಅವರಿಗಿಲ್ಲ ಎಂದುಕೊಂಡರು. ಈ ರೀತಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ರಿಲಿಜನ್ನಿನ ಉಗಮಕ್ಕೂ ಪೂರ್ವದಲ್ಲಿದ್ದ ಮನುಷ್ಯನ ಅವಸ್ಥೆಯು ಇಂದೂ ಭಾರತದಂತಹ ದೇಶಗಳಲ್ಲಿ ಜೀವಂತವಾಗಿ ಉಳಿದುಕೊಂಡು ಬಂದಿದೆ, ಗತಕಾಲವು ವರ್ತಮಾನದಲ್ಲೂ ಮುಂದುವರಿಯುತ್ತಿದೆ ಎಂಬುದಕ್ಕೆ ಭಾರತವು ದೃಷ್ಟಾಂತವಾಯಿತು.
ಭಾರತವು ಮನುಕುಲದ ಪ್ರಾರಂಭಿಕ ಅವಸ್ಥೆಯನ್ನು ಪ್ರಕಟಪಡಿಸುತ್ತಿದ್ದುದರಿಂದ ಅದು ಮನುಕುಲದ ಬಾಲ್ಯಾವಸ್ಥೆಯನ್ನು ನಿದರ್ಶಿಸಿತು. ಭಾರತೀಯ ಸಂಸ್ಕೃತಿಯನ್ನು ಸಹಜವಾಗಿಯೇ ಮನುಕುಲದ ಬಾಲ್ಯಾವಸ್ಥೆ ಎಂಬುದಾಗಿ ಐರೋಪ್ಯ ಚಿಂತಕರು ವರ್ಣಿಸಿದರು. ೧೯ನೆಯ ಶತಮಾನದಲ್ಲಿ ರೋಮಾಂಟಿಸಿಸಂ ಎಂಬ ಪಂಥವೂ ಯುರೋಪಿನಲ್ಲಿ ಬೆಳೆದುಬಂದಿತು. ರೋಮ್ಯಾಂಟಿಕ್ ಚಿಂತಕರು ಭಾರತದ ಬಾಲ್ಯಾವಸ್ಥೆಯನ್ನು ಹೆಚ್ಚುಗಾರಿಕೆಯೆಂಬಂತೇ ಪ್ರಶಂಸಿಸಿದ್ದು ಕಂಡುಬರುತ್ತದೆ. ಜ್ಞಾನೋದಯ ಚಿಂತಕರಿಗೆ ಈ ಬಾಲ್ಯಾವಸ್ಥೆಯು ಬುದ್ಧಿಹೀನತೆಯ ಲಕ್ಷಣವಾಗಿ ಕಂಡರೆ ರೋಮ್ಯಾಂಟಿಕ್ ಚಿಂತಕರಿಗೆ ಅದೇ ಭಾರತೀಯರ ಸದ್ಗುಣವಾಗಿ ಕಂಡಿತು. ಐರೋಪ್ಯರ ನಾಗರೀಕತೆಯ ಉತ್ಕೃಷ್ಟ ಅಂಶಗಳೆಲ್ಲ ಭಾರತದಲ್ಲಿ ಉಗಮವಾಗಿವೆ ಎಂಬುದಾಗಿ ಅವರು ವಾದಿಸಿದರು ಹಾಗೂ ಅದನ್ನು ಮಾನವ ನಾಗರೀಕತೆಯ ತೊಟ್ಟಿಲು ಎಂಬುದಾಗಿ ವರ್ಣಿಸಿದರು. ಅಂದರೆ ರೋಮ್ಯಾಂಟಿಕ್ ಚಿಂತಕರ ಪ್ರಕಾರ ಮನುಕುಲದ ಬಾಲ್ಯವೇ ಭಾರತ. ಆದರೆ ಭಾರತವು ಮುಂದಿನ ಹಂತಗಳನ್ನು ತುಳಿದ ವಿಷಯವನ್ನು ಅವರು ಕೂಡಾ ಪ್ರಸ್ತಾಪಿಸುವುದಿಲ್ಲ. ಅಂದರೆ ಒಟ್ಟಾರೆಯಾಗಿ ಈ ಎಲ್ಲಾ ಚಿಂತಕರೂ ಸೇರಿ ಭಾರತವೆಂಬ ಅದ್ಭುತ ಶಿಶುವು ಸಾವಿರಾರು ವರ್ಷಗಳಿಂದಲೂ ತೊಟ್ಟಿಲಲ್ಲಿ ಬೆರಳು ಚೀಪುತ್ತ ಮಲಗಿಕೊಂಡೇ ಇದೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟರು.
ಇದೇ ಚಿತ್ರಣದ ಮತ್ತೊಂದು ಆವೃತ್ತಿಯ ಪ್ರಕಾರ ಭಾರತವು ಬದಲಾವಣೆ ರಹಿತವಾದ ಜಡ ಸಮಾಜವಾಗಿದೆ. ಕಾರಣವೆಂದರೆ ಸಾವಿರಾರು ವರ್ಷಗಳಿಂದಲೂ ಅದರ ಜಾತಿ ವ್ಯವಸ್ಥೆ ಎಂಬ ಜಾಡ್ಯದಿಂದಾಗಿ ಅದು ಬೆಳವಣಿಗೆಯನ್ನು ನಿಲ್ಲಿಸಿಬಿಟ್ಟಿದೆ. ಇದನ್ನು ಪೌರ್ವಾತ್ಯ ನಿರಂಕುಶ ಪ್ರಭುತ್ವ, ಮಾರ್ಕ್ಸ್ವಾದಿಗಳ ಏಶಿಯಾಟಿಕ್ ಉತ್ಪಾದನಾ ವಿಧಾನ ಇತ್ಯಾದಿ ಸಿದ್ಧಾಂತಗಳಿಂದ ವಿವರಿಸುವ ಪ್ರಯತ್ನಗಳು ನಡೆದಿವೆ. ನಮ್ಮ ಯಾವುದೇ ಸಮಾಜ ವಿಜ್ಞಾನ ಪುಸ್ತಕಗಳನ್ನು ಓದಿದರೂ ಜಾತಿ ವ್ಯವಸ್ಥೆಯೆಂಬುದು ಬದಲಾವಣೆಯನ್ನು ವಿರೋಧಿಸುವ ಒಂದು ಶಕ್ತಿ ಎಂಬ ಕುರಿತು ಅವು ಸಂದೇಹವನ್ನುಳಿಸುವುದಿಲ್ಲ. ಭಾರತೀಯ ಜಾತಿವ್ಯವಸ್ಥೆ ಹಾಗೂ ಸಂಪ್ರದಾಯಗಳು ಪ್ರೌಢಾವಸ್ಥೆಯ ಕಡೆಗಿನ ನಮ್ಮ ಪ್ರಯಾಣವನ್ನು ಮನುಕುಲದ ಬಾಲ್ಯಾವಸ್ಥೆಗೆ ಮರಳಿ ಕೊಂಡೊಯ್ಯುತ್ತವೆ. ಹಾಗಾಗಿ ಅವು ಪ್ರತಿಗಾಮೀ ಶಕ್ತಿಗಳಾಗುತ್ತವೆ ಎಂಬುದಾಗಿ ಎಚ್ಚರಿಸಲಾಗುತ್ತದೆ.
ಜಾತಿ ವ್ಯವಸ್ಥೆಯು ಪ್ರಜಾಪ್ರಭುತ್ವದ ಪ್ರಯೋಗಕ್ಕೆ ಹಾಗೂ ಆ ಮೂಲಕ ಭಾರತದ ಪ್ರಗತಿ ಹಾಗೂ ಆಧುನಿಕತೆಗೆ ಅಡ್ಡಗಲ್ಲಾಗಿದೆ ಎಂಬುದಾಗಿ ರಾಜಕೀಯ ಚಿಂತಕರು ಇಂದಿಗೂ ನಂಬಿದ್ದಾರೆ. ನಮ್ಮ ಸಾಮಾಜಿಕ ಚಿಂತಕರು ಜಾತಿ ವ್ಯವಸ್ಥೆಯು ಇಂದಿಗೂ ಭಾರತೀಯ ಸಮಾಜದ ಒಂದು ಪಿಡುಗಾಗಿ ಉಳಿದುಕೊಂಡಿದೆ ಎಂದೇ ನಂಬುತ್ತಾರೆ. ಆದರೆ ಆಧುನಿಕ ಭಾರತವು ದಿನದಿಂದ ದಿನಕ್ಕೆ ಹಿಂದುಳಿಯುತ್ತ ಪ್ರಾಚೀನ ಕಾಲಕ್ಕೆ ಸಾಗುವ ಬದಲಾಗಿ ಇಂದು ವಿಶ್ವಸಮಾಜದಲ್ಲಿ ಅತ್ಯಂತ ಮುಂದುವರಿದ ದೇಶಗಳಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವತ್ತ ಸಾಗುತ್ತಿದೆ. ಎಕೆ ನಮ್ಮ ಆಧುನಿಕ ಚಿಂತಕರ ಭವಿಷ್ಯವಾಣಿಯು ಸುಳ್ಳಾಗುತ್ತಿದೆ ಎಂಬುದು ನಮಗೆ ಆಶ್ಚರ್ಯದ ವಿಷಯ. ಮೇಲೆ ಉಲ್ಲೇಖಿಸಿದ ಜ್ಞಾನೋದಯ ಚಿಂತಕರು ಹಾಗೂ ಅವರ ಕಥೆಯ ಹಿನ್ನೆಲೆ ಗೊತ್ತಿಲ್ಲದಿದ್ದರೆ ಈ ಹೇಳಿಕೆಗಳು ಹಾಗೂ ಎಚ್ಚರಿಕೆಗಳು ಎಕೆ ಸುಳ್ಳಾಗುತ್ತಿವೆ ಎಂಬುದು ನಮಗೆ ಅರ್ಥವಾಗುವ ಸಾಧ್ಯತೆಯೂ ಇಲ್ಲ.