ಪುರಾಣಗಳನ್ನು ಹಿಸ್ತರಿಯನ್ನಾಗಿ ಪರಿವರ್ತಿಸುವ ಗೀಳನ್ನು ನಮಗೆ ಹಚ್ಚಿದವರು ಪಾಶ್ಚಾತ್ಯರು. ಒಂದು ನಾಗರಿಕ ಸಮಾಜಕ್ಕೆ ಹಿಸ್ಟರಿ ಎಂಬುದು ಇರಲೇಬೇಕು ಎಂದು ಅವರು ನಂಬಿದ್ದರು. ಅವರ ಪ್ರಕಾರ ಹಿಸ್ಟರಿ ಎಂದರೆ ಗತಕಾಲದಲ್ಲಿ ನಿಜವಾಗಿಯೂ ನಡೆದ ಘಟನೆಗಳು. ಅವರು ಭಾರತದಲ್ಲಿ ವಸಾಹತುವನ್ನು ಸ್ಥಾಪಿಸಿದಾಗ ಭಾರತೀಯರ ಹಿಸ್ಟರಿಯನ್ನು ತಿಳಿದುಕೊಳ್ಳಲು ಇಲ್ಲಿನ ಪಂಡಿತರನ್ನು ಆಶ್ರಯಿಸಿದರು. ಆಗ ಅವರಿಗೆ ನಮ್ಮ ಪಂಡಿತರು ತಮಗೆ ಗೊತ್ತಿದ್ದ ಪುರಾಣ, ಪ್ರತೀತಿ, ಜಾನಪದ ಇತ್ಯಾದಿಗಳನ್ನೆಲ್ಲ ತಿಳಿಸಿದರು. ಏಕೆಂದರೆ ಅವರಿಗೆ ಗತಕಾಲದ ಸಂಗತಿಗಳೆಂದರೆ ಅವೇ ಆಗಿದ್ದವು. ಅವುಗಳಲ್ಲಿ ಪಾಶ್ಚಾತ್ಯ ವಿದ್ವಾಂಸರಿಗೆ ಒಂದೆರಡು ಕಥೆಗಳನ್ನು ಬಿಟ್ಟರೆ ಉಳಿದವೆಲ್ಲ ನಿಜ ಘಟನೆಗಳಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಭಾರತೀಯರಿಗೆ ಹಿಸ್ಟರಿ ಎಂದರೆ ಗೊತ್ತೇ ಇಲ್ಲ ಎಂದು ಪಾಶ್ಚಾತ್ಯರು ಅರಿತುಕೊಂಡು ಇವರ ಹಿಸ್ಟರಿಯನ್ನು ತಾವೇ ರಚಿಸಲು ಮುಂದಾದರು. ಆದರೆ ಹಿಸ್ಟರಿಯನ್ನು ರಚಿಸಲು ಆಧಾರಗಳು ಬೇಕು. ಆದರೆ ಭಾರತದಲ್ಲಿ ಧಂಡಿಯಾಗಿ ಪುರಾಣಗಳು ಇದ್ದವು. ಆಗ ಅವರು ಪುರಾಣಗಳನ್ನಾಧರಿಸಿ ಭಾರತೀಯರ ಹಿಸ್ಟರಿಯನ್ನು ಬರೆಯಲು ಸಾಧ್ಯವಿಲ್ಲ ಎಂದು ತಮ್ಮ ಪ್ರಯತ್ನವನ್ನು ಕೈಬಿಡಬಹುದಿತ್ತು. ಆದರೆ ಅದಕ್ಕೆ ಬದಲಾಗಿ ಅವರು ಈ ಪುರಾಣಗಳನ್ನೇ ಇಟ್ಟುಕೊಂಡು ಹಿಸ್ಟರಿಯನ್ನು ಬರೆಯುವ ಸಾಧ್ಯತೆಯನ್ನು ಶೋಧಿಸಿದರು. ಅದು ಹೇಗೆಂದರೆ ಈ ಭಾರತೀಯರಿಗೆ ತಮ್ಮ ಗತಕಾಲದ ಘಟನೆಗಳನ್ನು ದಾಖಲಿಸಬೇಕಿತ್ತು, ಆದರೆ ಹಿಸ್ಟರಿಯ ಪರಿಜ್ಞಾನ ಇಲ್ಲದಿರುವುದರಿಂದ ಹೀಗೆ ಒಡೊಡ್ಡಾಗಿ ಪುರಾಣಗಳನ್ನು ಬರೆದಿಟ್ಟಿದ್ದಾರೆ ಅಂತ ಅರ್ಥೈಸಿಕೊಂಡರು. ಇನ್ನೂ ಕೆಲವರು ಇಲ್ಲಿನ ಬ್ರಾಹ್ಮಣರು ತಮ್ಮ ಬೇಳೆಬೇಯಿಸಲಿಕ್ಕಾಗಿ ನಿಜ ಘಟನೆಗಳನ್ನು ತಿರುಚಿ ಪುರಾಣಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅರ್ಥೈಸಿದರು. ಅಂದರೆ ಪುರಾಣಗಳ ಒಳಗೆ ನಿಜದ ಹೂರಣ ಇದೆ, ಅದನ್ನು ಹೊರತೆಗೆದು ಹಿಸ್ಟರಿಯನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ತೀರ್ಮಾನಿಸಿದರು. ಈ ಧೋರಣೆಯನ್ನೇ ಅನುಸರಿಸಿ ವಿದ್ಯಾವಂತ ಭಾರತೀಯರೂ ಪುರಾಣಗಳನ್ನು ಹಿಸ್ಟರಿಗಳನ್ನಾಗಿ ಪರಿವರ್ತಿಸತೊಡಗಿದರು.
ಇವರೆಲ್ಲ ಪುರಾಣಗಳಿಂದ ಹಿಸ್ಟರಿಯನ್ನು ತೆಗೆದದ್ದು ಹೇಗೆ? ಪಾಶ್ಚಾತ್ಯರು ಭಾರತೀಯ ಸಮಾಜದ ಕುರಿತು ಯಾವ ಸತ್ಯಗಳನ್ನು ನಂಬಿಕೊಂಡಿದ್ದರೋ ಆ ಸತ್ಯಗಳನ್ನು ಪುರಾಣಗಳ ಸಂಕೇತ ಭಾಷೆಯಲ್ಲಿ ಕಂಡರು. ಅಂದರೆ ಪುರಾಣಗಳು ಪಾಶ್ಚಾತ್ಯರು ಭಾರತೀಯರ ಕುರಿತು ಅಂದುಕೊಂಡಿದ್ದನ್ನು ಸತ್ಯವೆಂದು ನಿದರ್ಶಿಸತೊಡಗಿದವು. ಅವುಗಳಲ್ಲಿ ಆರ್ಯ ದ್ರಾವಿಡ ಜನಾಂಗಗಳ ಕಥೆ ಬಹು ಮುಖ್ಯವಾದುದು. ಈ ಕಥೆಯ ಪ್ರಕಾರ ಈ ದೇಶದಲ್ಲಿ ಮೊದಲು ದ್ರಾವಿಡರನ್ನೂ ಒಳಗೊಂಡಂತೆ ಅನೇಕ ಮೂಲನಿವಾಸಿಗಳಿದ್ದರು. ನಂತರ ವಾಯುವ್ಯ ಭಾಗದಿಂದ ಆರ್ಯಜನಾಂಗದ ದಾಳಿ ನಡೆಯಿತು. ಆರ್ಯರು ಮುಂದುವರಿದ ಜನಾಂಗವಾಗಿದ್ದು ಮೂಲನಿವಾಸಿಗಳನ್ನು ಸೋಲಿಸಿ ತಮ್ಮ ಅಡಿಯಾಳುಗಳನ್ನಾಗಿ ಮಾಡಿಕೊಂಡರು. ಅದರ ಫಲವಾಗಿಯೇ ಜಾತಿ ವ್ಯವಸ್ಥೆ ಹುಟ್ಟಿಕೊಂಡಿತು. ಇಂದಿನ ಮೇಲುಜಾತಿಗಳು ಆರ್ಯರ ಸಂತಾನಗಳಾದರೆ ಶೂದ್ರರು, ದಲಿತರೆಲ್ಲ ಮೂಲನಿವಾಸಿಗಳ ಸಂತಾನಗಳು. ಹೀಗೆ ವರ್ತಮಾನದ ಭಾರತೀಯ ಸಮಜದ ಕುರಿತು ಆರ್ಯ-ದ್ರಾವಿಡ ಕಥೆಯು ಊಹೆಯ ರೂಪದಲ್ಲಿ ಮೈತಳೆದ ನಂತರ ಭಾರತೀಯ ಪುರಾಣಗಳಲ್ಲಿ ನಿಜವಾಗಿಯೂ ಏನು ಅಡಗಿದೆ ಎಂಬುದನ್ನು ಹುಡುಕುವ ಕೆಲಸ ಹಿಸ್ಟರಿ ಬರೆಯುವವರಿಗೆ ಸುಲಭವಾಯಿತು. ಪುರಾಣಗಳಲ್ಲಿ ಅಡಗಿದ ಇಂಥ ನಿಜಘಟನೆಗಳು ವರ್ತಮಾನದಲ್ಲಿ ಅನುಭವಕ್ಕೂ ಬರುವಂತಿದ್ದವು.
ಈ ಹಿನ್ನೆಲೆಯನ್ನಿಟ್ಟುಕೊಂಡು ಪುರಾಣಗಳಲ್ಲಿ ಜನಾಂಗಗಳನ್ನು ಹುಡುಕುವ ಕೆಲಸ ಮೊದಲಾಯಿತು. ವೈದಿಕ ಸಾಹಿತ್ಯದಲ್ಲಿ ಆರ್ಯರು-ದಸ್ಯುಗಳ ವರ್ಣನೆಯಲ್ಲಿ ಜನಾಂಗ ದ್ವೇಷವನ್ನು ಕಾಣಲಾಯಿತು. ತದನಂತರ ಬಂದ ಪುರಾಣಗಳಲ್ಲಿ ಅಸುರರು, ರಾಕ್ಷಸರು, ದೈತ್ಯರು ಇವರೆಲ್ಲರನ್ನೂ ಮೂಲನಿವಾಸಿ ಜನಾಂಗಗಳಿಗೆ ಸಮೀಕರಿಸಲಾಯಿತು. ವಿಷ್ಣುವು ವಾಮನನಂತೆ ಬಂದು ಬಲಿಯ ರಾಜ್ಯವನ್ನು ಹರಣ ಮಾಡಿ ಅವನನ್ನು ಮೆಟ್ಟಿ ಪಾತಾಳಕ್ಕೆ ಕಳುಹಿಸುವ ಕಥೆಯು ಫುಲೆಯವರಿಗೆ ಆರ್ಯರು ಮೂಲನಿವಾಸಿಗಳನ್ನು ರಾಜ್ಯ ಭ್ರಷ್ಟರನ್ನಾಗಿ ಮಾಡಿದ ಸತ್ಯವನ್ನು ಸಾರಿತು. ರಾಮನು ರಾವಣನನ್ನು ಸೋಲಿಸಿದ್ದು ಆರ್ಯರು ದ್ರಾವಿಡ ನಾಯಕನನ್ನು ಕೊಂದು ಆ ಜನಾಂಗವನ್ನು ದಮನಿಸಿದ ಹಿಸ್ಟರಿಯಾಗಿ ಪೆರಿಯಾರ್ರಿಗೆ ಕಾಣಿಸಿತು. ಹೀಗೆ ಪೌರಾಣಿಕ ಪಾತ್ರಗಳೆಲ್ಲ ಭಾರತದಲ್ಲಿ ಇತಿಹಾಸ ಕಾಲದಲ್ಲಿ ಇದ್ದ ಜನಾಂಗಗಳ ನಾಯಕರಾಗಿ, ಅವರ ಕೃತ್ಯಗಳೆಲ್ಲ ಆಯಾ ಜನಾಂಗಗಳ ಕುರಿತ ಹಿಸ್ಟರಿಗಳಾದವು. ಹೀಗೆ ಪುರಾಣಗಳನ್ನು ಹಿಸ್ಟರಿಯನ್ನಾಗಿ ಮಾಡುವಾಗ ಇವರೆಲ್ಲ ಪುರಾಣಗಳನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ ಎಂದುಕೊಳ್ಳಬೇಡಿ. ವರ್ತಮಾನದಲ್ಲಿ ನಿಜವೆಂದುಕೊಂಡವುಗಳನ್ನು ಅವುಗಳಿಗೆ ಹೊಂದುವ ಪುರಾಣಗಳಲ್ಲಿ ಕಂಡಿದ್ದಾರೆ ಅಷ್ಟೆ. ಈ ನಿಜಗಳಿಗೆ ವಿರುದ್ಧವಾದ ವಿಫುಲ ಉದಾಹರಣೆಗಳು ಈ ಪುರಾಣಗಳಲ್ಲೇ ಇವೆ. ಪುರಾಣಗಳಲ್ಲಿ ನಿಜ ಘಟನೆಗಳು ಅಡಗಿವೆ ಅಂತಾದಲ್ಲಿ ವಿರುದ್ಧ ಉದಾಹರಣೆಗಳೂ ನಿಜಘಟನೆಗಳಾಗಿರಬೇಕು.
ಪುರಾಣಗಳನ್ನು ಹಿಸ್ಟರಿಯನ್ನಾಗಿ ಮಾಡುವ ಕೆಲಸವು ಎಷ್ಟು ಹಾಸ್ಯಾಸ್ಪದ ಎಂಬುದಕ್ಕೆ ಮುಂದಿನ ದೃಷ್ಟಾಂತಗಳೇ ಸಾಕು: ಪುರಾಣಗಳ ಪ್ರಕಾರ ದೇವತೆಗಳು ಹಾಗೂ ದಾನವರು ಒಂದೇ ತಂದೆಯ, ಅಂದರೆ ಕಶ್ಯಪನ ಬೇರೆ ಬೇರೆ ಹೆಂಡತಿಯರ ಪುತ್ರರು. ಒಂದೇ ತಂದೆಗೆ ಎರಡು ಜನಾಂಗಗಳು ಹುಟ್ಟುತ್ತವೆ ಎಂದಾದರೆ ಇವರು ಎರಡು ಜನಾಂಗಗಳು ಎನ್ನಲಡ್ಡಿಯಿಲ್ಲ. ಅಂದರೆ ಜನಾಂಗವಾದವನ್ನು ಮುಂದಿಡುವವರು ಈ ಪುರಾಣವನ್ನು ಹತ್ತಿಕ್ಕಬೇಕಾಗುತ್ತದೆ. ದೈತ್ಯರು ಹಾಗೂ ದೇವತೆಗಳ ನಡುವೆ ಮದುವೆ ಸಂಬಂಧಗಳಾಗಿವೆ, ಹಾಗಾಗಿ ಈ ಎರಡು ಜನಾಂಗಗಳು ಮಿಶ್ರವಾಗದೇ ಶುದ್ಧವಾಗಿ ಉಳಿದು ಬಂದವು ಎಂದು ಹೇಗೆ ಹೇಳುತ್ತೀರಿ? ದೈತ್ಯರು ಅನಾರ್ಯರಾಗಿದ್ದ ಪಕ್ಷದಲ್ಲಿ ರಾವಣನು ಬ್ರಾಹ್ಮಣ ಹೇಗಾದ? ಪುರಾಣ ಪ್ರಸಿದ್ಧ ದೈತ್ಯರಲ್ಲಿ ಹಲವರು ಶಿವಭಕ್ತರು. ಅವರಲ್ಲಿ ಕೆಲವರನ್ನು ವಿಷ್ಣು ಸಂಹರಿಸುತ್ತಾನೆ.. ಇಂಥ ಅಸುರರ ಸಂಹಾರವು ವೈಷ್ಣವ-ಶೈವ ಮತೀಯ ಸಂಘರ್ಷವೆಂಬುದಾಗಿ ಏಕೆ ನಿರೂಪಿಸಬಾರದು? ಹಾಗೆ ನಿರೂಪಿಸಿದವರೂ ಇದ್ದಾರೆ ಅಂತಿಟ್ಟುಕೊಳ್ಳಿ. ಆದರೆ ಅದರಿಂದ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ. ಏಕೆಂದರೆ ವೈಷ್ಣವ ಪುರಾಣಗಳು ತಿಳಿಸುವಂತೆ ವಿಷ್ಣುವು ತನ್ನ ಅವತಾರಗಳಲ್ಲಿ ಸದೆಬಡಿದ ಅಸುರರೆಲ್ಲ ಮೂಲತಃ ಅವನ ಬಂಟರಾದ ಜಯವಿಜಯರೇ. ಹಾಗಾಗಿ ಅದೇಕೆ ಒಡೆಯ ಹಾಗೂ ಆಳುಗಳ ನಡುವಿನ ವರ್ಗಸಂಘರ್ಷವಲ್ಲ? ಮಹಿಷಾಸುರ ಮರ್ದಿನಿಯ ಪುರಾಣವು ದಲಿತರ ಮೇಲೆ ಆರ್ಯರ ವಿಜಯಕ್ಕೆ ಮಾತ್ರ ಸಂಕೇತವಾಗಬೇಕು? ಏಕೆ ಈ ಪುರಾಣವು ಸ್ತ್ರೀವಾದಿಗಳಿಗೆ ರೋಮಾಂಚನವನ್ನು ಹುಟ್ಟಿಸಬಾರದು? ಮಹಿಷಾಸುರನು ದಲಿತನೆಂದು ಸಾರುವುದು ಸ್ತ್ರೀಯರ ವಿರುದ್ಧ ಪುರುಷರ ಹುನ್ನಾರವೇಕಾಗಿರಬಾರದು? ಇಂದು ಪುರಾಣಗಳಲ್ಲಿ ಖಳರಂತೆ ಚಿತ್ರಿತರಾದ ಕೆಲವು ದೈತ್ಯರ ಪೂಜಾ ಪಂಥಗಳು ಇವೆ. ಹಾಗೂ ಅವರ ಕುರಿತ ಪುರಾಣಗಳಲ್ಲಿ ದೇವತೆಗಳೇ ಖಳರಾಗಿ ಚಿತ್ರಿತರಾಗುವುದೂ ಕೂಡ ವಾಸ್ತವ. ಆದರೆ ಅದು ಜನಾಂಗಗಳ ಸಂಘರ್ಷವೆ? ಬ್ರಾಹ್ಮಣರು ಕೂಡ ದೀಪಾವಳಿಯಲ್ಲಿ ವಾಮನಾವತಾರದ ಹಾಡನ್ನು ಹಾಡುತ್ತ ತುಳಿಸಿಕೊಂಡ ಬಲಿಯನ್ನೇ ಪೂಜಿಸುತ್ತಾರಲ್ಲ? ಇದು ಅನಾರ್ಯರು ಬ್ರಾಹ್ಮಣರಿಂದ ತುಳಿಸಿಕೊಂಡ ಕಥೆಯಾಗಿದ್ದರೆ ಬ್ರಾಹ್ಮಣರು ಬಲಿಯನ್ನು ಪೂಜಿಸುವ ಕಾರಣದಿಂದ ಅವರು ತುಳಿತಕ್ಕೊಳಗಾದ ಜನಾಂಗ ಏಕಲ್ಲ? ಈ ರೀತಿಯಲ್ಲಿ ಇಂಥ ಪೂಜೆ ಹಾಗೂ ಪುರಾಣಗಳಲ್ಲೆಲ್ಲ ಪಾಶ್ಚಾತ್ಯರ ಸಾಮಾಜಿಕ ಸಿದ್ಧಾಂತಗಳ ನಿಜವನ್ನು ಕಾಣುವ ಕೆಲಸ ಅಷ್ಟು ಸುಲಭವಲ್ಲ. ಇಷ್ಟೆಲ್ಲ ಸಮಸ್ಯೆಗಳು ಕಣ್ಣಿಗೆ ರಾಚುವಂತಿದ್ದರೂ ಪುರಾಣಗಳನ್ನು ಹಿಸ್ಟರಿಯನ್ನಾಗಿ ಬದಲಾಯಿಸುವ ಕೆಲಸದಲ್ಲಿ ಇಂದು ಎಡ-ಬಲ-ನಡು ಎಂಬ ವ್ಯತ್ಯಾಸವಿಲ್ಲದೇ ಎಲ್ಲಾ ಗುಂಪುಗಳೂ ಉದ್ಯುಕ್ತವಾಗಿವೆ. ಆಶ್ಚರ್ಯವೆಂದರೆ ತಾವು ಹಿಸ್ಟರಿ ಎಂಬ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರು, ಹಿಂದುತ್ವವಾದಿಗಳು ರಾಮಾಯಣ ಮಹಾಭಾರತಗಳನ್ನೆಲ್ಲ ಹಿಸ್ಟರಿಗಳನ್ನಾಗಿ ಮಾಡಿ ಸಂಘರ್ಷವನ್ನು ಹುಟ್ಟಿಸುವ ಅಜ್ಞಾನಿಗಳು ಎಂದು ಬೊಬ್ಬೆ ಹೊಡೆಯುತ್ತಿರುವ ಎಡಪಂಥೀಯ ವಿದ್ವಾಂಸರೂ ಅದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ಖ್ಯಾತ ಇತಿಹಾಸಕಾರ್ತಿ ರೋಮಿಲಾ ಥಾಪರ್ ಪ್ರಕಾರ ಪ್ರಾಚೀನ ಭಾರತೀಯರಿಗೆ ಹಿಸ್ಟರಿ ಬರವಣಿಗೆ ಗೊತ್ತಿತ್ತು, ಪುರಾಣಗಳೊಳಗೆ ಆ ಹಿಸ್ಟರಿ ಅಡಗಿದೆ. ಅದನ್ನು ಹೇಗೆ ಹೊರಗೆ ತೆಗೆಯಬೇಕೆಂಬ ಕಲೆ ಇತಿಹಾಸಕಾರನಿಗೆ ಗೊತ್ತಿರಬೇಕು ಅಷ್ಟೆ. ಒಂದು ಲೆಕ್ಕದಲ್ಲಿ ಈ ಹೇಳಿಕೆ ನಿಜವೇ. ಏಕೆಂದರೆ, ಇದುವರೆಗೆ ನಾವು ನೋಡಿದಂತೆ ಒಬ್ಬನು/ಳು ಯಾವ ರಾಜಕೀಯ ಪಂಥಕ್ಕೆ ಸೇರಿದ್ದಾನೆ/ಳೆ ಎಂಬುದರ ಮೇಲೆ ಅವನು/ಳು ಪುರಾಣದಿಂದ ಯಾವ ಹಿಸ್ಟರಿಯನ್ನು ತೆಗೆಯುತ್ತಾನೆ ಎಂಬುದು ಅವಲಂಬಿಸಿದೆ. ಬಹುಶಃ ಇದೇ ಇತಿಹಾಸಕಾರನ ಕಲೆಯಿರಬಹುದು!