ಮೂರ್ತಿಪೂಜೆ ಹಾಗೂ ಪವಾಡಗಳು ಸುಳ್ಳು ಎಂದು ಸಾಧಿಸುವವರು ಈ ಸಂಪ್ರದಾಯಗಳ ಎದುರು ಅವಿವೇಕಿಗಳಾಗಿ, ಮೂರ್ಖರಾಗಿ ಕಾಣಿಸದೇ ಮತ್ತೇನು? ಈ ಸಂಪ್ರದಾಯಗಳಿಗೆ ನಿಜವಾಗಿಯೂ ಅವರು ತೋರಿಸಬೇಕಾದದ್ದು ಮೂರ್ತಿಗಳು ಸುಳ್ಳು ಎಂಬುದನ್ನೆಲ್ಲ ಅದನ್ನು ನೂರಾರು ವರ್ಷಗಳಿಂದ ಕ್ರೈಸ್ತ ಮಿಶನರಿಗಳು ಮಾಡಿ ಸೋತಿದ್ದಾರೆ. ಬದಲಾಗಿ ಭಾರತೀಯ ಆಧ್ಯಾತ್ಮ ಸಂಪ್ರದಾಯಗಳ ಸಂದರ್ಭದಲ್ಲಿ ಅವರು ತೋರಿಸಬೇಕಾದದ್ದು ಮೂರ್ತಿಪೂಜೆಯು ತತ್ವಜ್ಞಾನಕ್ಕೆ ಸಾಧನವಲ್ಲ ಎಂಬುದನ್ನು.
“ನಾನು ದೇವರನ್ನು ನಂಬುತ್ತೇನೆ, ಆದರೆ ಅವನು ನಿರಾಕಾರ ಶಕ್ತಿ ಎಂದು ಭಾವಿಸುತ್ತೇನೆ. ಹಾಗಾಗಿ ಅವನಿಗೆ ಆಕಾರ ಕೊಡುವುದನ್ನು ವಿರೋಧಿಸುತ್ತೇನೆ. ಹಿಂದೂ ಧರ್ಮವು ಇದೇ ಸತ್ಯವನ್ನೇ ಸಾರುತ್ತದೆ” ಎಂಬ ಧೋರಣೆ ಬಹಳಷ್ಟು ಆಧುನಿಕ ಚಿಂತಕರಲ್ಲಿ ಇದೆ. ಈ ಹೇಳಿಕೆಯನ್ನು ಮಾಡುವವರು ತಾವು ಭಾರತೀಯ ಅಧ್ಯಾತ್ಮ ಸಂಪ್ರದಾಯದ ಸತ್ಯವನ್ನೇ ಹೇಳುತ್ತಿದ್ದೇವೆ ಎಂದುಕೊಂಡಿದ್ದಾರೆ. ಹಾಗೂ ಮೂರ್ತಿಪೂಜೆ ದೇವರ ನಿರಾಕಾರವನ್ನು ಅರಿಯಲು ಒಂದು ಅಡ್ಡಿಯಾಗಿರುವುದರಿಂದ ಅದನ್ನು ನಿವಾರಿಸುವ ಅಗತ್ಯವಿದೆ ಎನ್ನುತ್ತಾರೆ. ಆದರೆ ಈ ಮೇಲಿನ ಹೇಳಿಕೆಗಳನ್ನು ನೀಡುವವರು ಭಾರತೀಯ ಅಧ್ಯಾತ್ಮ ಸಂಪ್ರದಾಯದ ವಕ್ತಾರರಂತೂ ಅಲ್ಲ. ಏಕೆಂದರೆ ನಮ್ಮ ಅಧ್ಯಾತ್ಮ ಸಂಪ್ರದಾಯಗಳು ಮೂರ್ತಿಪೂಜೆಯನ್ನು ವಿರೋಧಿಸುವುದಿಲ್ಲ, ಮೂರ್ತಿಪೂಜೆಯು ಅಧ್ಯಾತ್ಮ ಸಾಧನೆಯಲ್ಲಿ ದಾರಿತಪ್ಪಿಸುವ ಮೋಸ, ಅದನ್ನು ಮಾಡಲೇಬೇಡಿ ಎಂದು ಎಲ್ಲಿಯೂ ಹೇಳುವುದಿಲ್ಲ. ಮೂರ್ತಿಯು ಭಗವಂತನ ಅಮೂರ್ತ ತತ್ವವನ್ನು ತಿಳಿಯಲಿಕ್ಕೆ ದಾರಿಯಾಗಿದೆ. ಈ ಕಾರಣದಿಂದಲೇ ಮೂರ್ತಿಪೂಜೆಯಲ್ಲೇ ತೃಪ್ತಿಪಟ್ಟುಕೊಂಡ ಸಾಧಕರನ್ನು ಟೀಕಿಸಿ ಎಚ್ಚರಿಸುವ ಸಂದರ್ಭದಲ್ಲಿ ಮೂರ್ತಿರೂಪಗಳ ಮಿತಿಯನ್ನು ತಿಳಿಸಿಕೊಡುವ ಕೆಲಸವನ್ನು ಅವು ಮಾಡುತ್ತವೆ. ಅಜ್ಞಾನದಲ್ಲಿ ಬಂಧಿತನಾದ ಮನುಷ್ಯನ ಬುದ್ಧಿಗೆ ಏಕಾಏಕಿಯಾಗಿ ಅಮೂರ್ತ ತತ್ವವನ್ನು ಅರಿಯಲು ಅಸಾಧ್ಯ. ಅಂಥವನಿಗೆ ಮೂರ್ತಿಪೂಜೆ ಒಂದು ಸಾಧನ. ಹಾಗಾಗಿ ಎಲ್ಲಾ ಅಧ್ಯಾತ್ಮ ಮಾರ್ಗಗಳೂ ಮೂರ್ತಿಪೂಜೆ ಉಪಾಯವನ್ನು ಕಲ್ಪಿಸಿವೆ.
“ದೇವರೆಂಬವನೇ ಇಲ್ಲ, ಅವನು ಮನುಷ್ಯನ ಕಲ್ಪನೆ. ಹಾಗಾಗಿ ಈ ಮೂರ್ತಿಪೂಜೆಯು ಪುರೋಹಿತರ ಕಣ್ಕಟ್ಟು” ಎಂಬ ಮತ್ತೊಂದು ಥರದ ಹೇಳಿಕೆಗಳೂ ಇವೆ. ಈ ಹೇಳಿಕೆಯನ್ನು ಮಾಡುವವರು ತಾವು ನಾಸ್ತಿಕರು ಎಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತಾರೆ ಹಾಗೂ ಅವರೂ ಕೂಡ ಮೂರ್ತಿಪೂಜೆಯನ್ನು ತೊಡೆಯುವುದೇ ನಮ್ಮ ಸಮಾಜದ ಉದ್ಧಾರಕ್ಕೆ ಮಾರ್ಗ ಎನ್ನುತ್ತಾರೆ. ಅಷ್ಟೇ ಅಲ್ಲ ಅವರನ್ನು ವಿರೋಧಿಸುವವರೂ ಕೂಡ ಅವರನ್ನು ನಾಸ್ತಿಕರೆಂದು ಪದೇ ಪದೇ ಜರಿಯುವುದು ಕೂಡ ಕಂಡುಬರುತ್ತದೆ. ಆದರೆ ಹಾಗೆ ಅವರನ್ನು ಕರೆಯುವುದು ತಪ್ಪು. ನಮ್ಮಲ್ಲಿ ನಾಸ್ತಿಕರಾದ ಬೌದ್ಧರು ಹಾಗೂ ಜೈನರು ಕೂಡಾ ಮೂರ್ತಿಪೂಜೆಯನ್ನು ಅಳವಡಿಸಿಕೊಂಡಿದ್ದಾರೆ. ಜೈನ ಬೌದ್ಧರು ಪರಮಾತ್ಮ ತತ್ವವನ್ನು ಒಪ್ಪುವುದಿಲ್ಲ. ಹಾಗಾಗೇ ಅವರನ್ನು ನಾಸ್ತಿಕರೆಂದು ಹೇಳಲಾಗುತ್ತದೆ. (ಅಸ್ತಿ=ಇದೆ; ನಾಸ್ತಿ=ಇಲ್ಲ. ಆಸ್ತಿಕನೆಂದರೆ ಆ ತತ್ವ ಇದೆ ಎಂದು ಒಪ್ಪುವವನು, ನಾಸ್ತಿಕನು ಅದು ಇಲ್ಲ ಎನ್ನುವವನು. ಈ ಪರಿಭಾಷೆಗಳಿಗೆ ಅಧ್ಯಾತ್ಮದ ಸಂದರ್ಭದ ಹಿನ್ನೆಲೆಯಿದೆ). ಆದರೆ ನಾಸ್ತಿಕರಾದವರು ಮೂರ್ತಿಪೂಜೆಯನ್ನು ನಿರಾಕರಿಸಬೇಕೆಂದಿಲ್ಲ. ನಾಸ್ತಿಕರ ಕೇವಲ ಜ್ಞಾನವನ್ನು/ ಶೂನ್ಯವನ್ನು ಹೊಂದಲು ಕೂಡ ಮೂರ್ತಿ ಪೂಜೆ ಸಹಕರಿಸಿದೆ. ಅದಿಲ್ಲದಿದ್ದರೆ ಅವೇಕೆ ಸಾವಿರಾರು ವರ್ಷ ಮೂರ್ತಿಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದವು? ಆಸ್ತಿಕ ಹಾಗೂ ನಾಸ್ತಿಕ ಸಂಪ್ರದಾಯಗಳೆರಡೂ ಕೂಡ ತಂತಮ್ಮ ಗುರಿ ಸಾಧನೆಗೆ ಮೂರ್ತಿಪೂಜೆ ಸಾಧನವಾಗಿದೆ ಎಂದು ಒಪ್ಪಿಕೊಂಡಿದ್ದವು. ಹಾಗಾಗಿ ಮೂರ್ತಿಪೂಜೆಯನ್ನು ಒಪ್ಪುವುದಿಲ್ಲ ಎಂಬ ವಾದವು ನಾಸ್ತಿಕ ದೃಷ್ಟಿಯೂ ಅಲ್ಲ.
ಭಾರತದಲ್ಲಿ ಒಂದೆಡೆ ಮೂರ್ತಿಪೂಜೆ ಎಂಬುದು ಮತ ಪಂಥಗಳ ಸೀಮೆಯನ್ನು ದಾಟಿ ಪ್ರಸ್ತುತತೆಯನ್ನು ಪಡೆದಿದ್ದರೆ, ಮತ್ತೊಂದೆಡೆ ಮೂರ್ತಿಪೂಜೆಯೇ ಆತ್ಯಂತಿಕ ಎಂದು ನಾಸ್ತಿಕರು ಹೋಗಲಿ, ಆಸ್ತಿಕ ಸಂಪ್ರದಾಯಗಳು ಕೂಡ ಒಪ್ಪಿರಲಿಲ್ಲ. ಎಂಬುದು ಗಮನಾರ್ಹ. ಅಂದರೆ, ಮೂರ್ತಿಪೂಜೆಯು ಅಧ್ಯಾತ್ಮ ಸಾಧನೆಗೆ ಕಡ್ಡಾಯವಾಗಿರಲಿಲ್ಲ. ಅದನ್ನು ಉಪೇಕ್ಷಿಸಿ ಮುಂದುವರಿಯುವ ದಾರಿ ಅಲ್ಲಿ ತೆರೆದೇ ಇದೆ. ವೇದಾಂತ ಸಂಪ್ರದಾಯವು ನಿರಾಕಾರ ಬ್ರಹ್ಮವೇ ತಿಳಿಯಬೇಕಾದ ವಸ್ತು, ಎನ್ನುತ್ತದೆ. ದೇವತೆಗಳಿಗೆ ಈ ಸಂಪ್ರದಾಯಗಳಲ್ಲಿ ಆತ್ಯಂತಿಕ ಸ್ಥಾನವಿಲ್ಲ. ಶಿವ, ವಿಷ್ಣು ಪಾರಮ್ಯವನ್ನು ಎತ್ತಿಹಿಡಿಯುವ ಭಕ್ತಿ ಸಂಪ್ರದಾಯಗಳೂ ಕೂಡ ಅವರ ಪರಾ ರೂಪವನ್ನು ನಿರಾಕಾರ ತತ್ವಗಳನ್ನಾಗಿ ಕಲ್ಪಿಸಿ ಮೂರ್ತಿಯೂ ಅವನ ಒಂದು ರೂಪವೆನ್ನುತ್ತವೆ. ಅಂದರೆ ಮೂರ್ತಿಯು ಈ ಪರಾತತ್ವದ ದೇಹವೆನ್ನುತ್ತವೆ. ಈ ದೇಹವನ್ನು ದಾಟಿ ಪರಾತತ್ವವನ್ನು ಕಾಣದಿದ್ದರೆ ಮೂರ್ತಿಪೂಜೆಯ ಉದ್ದೇಶವೇ ಈಡೇರುವುದಿಲ್ಲ. ಮೂರ್ತಿಗಳನ್ನು ಹೇಗೆ ರಚಿಸಬೇಕೆಂದು ನಿರ್ದೇಶಿಸುವ ಆಗಮ ಶಾಸ್ತ್ರಗಳೇ ‘ಪ್ರತಿಮೆಗಳು ಅಲ್ಪಬುದ್ಧಿಯವರಿಗಾಗಿ ಯೋಜಿತವಾಗಿವೆ.’ ‘ಕಾಷ್ಟ, ಲೋಷ್ಟ, ಲೋಹಗಳ ಮೂರ್ತಿಗಳನ್ನು ಪೂಜೆ ಮಾಡುವುದರಿಂದ ಜನನ ಮರಣದ ಬಂಧನಕ್ಕೆ ಸಿಲುಕುತ್ತಾರೆ.’ ಇತ್ಯಾದಿ ವಾಕ್ಯಗಳನ್ನೂ ನಮಗೆ ನೀಡುತ್ತವೆ. ಅಂದರೆ, ಅದನ್ನು ಸಾಧನವನ್ನಾಗಿಸಿಕೊಂಡು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳದಿದ್ದರೆ ಅವುಗಳಿಂದ ಮೋಕ್ಷ ಸಾಧ್ಯವಿಲ್ಲ ಎನ್ನುತ್ತವೆ. ಆದರೆ ಇವರಾರೂ ಮೂರ್ತಿಪೂಜೆ ನಿಲ್ಲಬೇಕು ಎನ್ನುವುದಿಲ್ಲ. ಅದನ್ನು ಅರಿತು ಆಚರಿಸುವುದು ಜ್ಞಾನಕ್ಕೆ ಮಾರ್ಗವಾಗಬಲ್ಲದು ಎಂದೇ ಅನ್ನುತ್ತಾರೆ. ಅರಿಯದಿದ್ದರೆ ಅದೇ ಮೌಢ್ಯ, ಭಾರತೀಯ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯು ಮೌಢ್ಯ ಎಂಬ ಟೀಕೆ ಏನಾದರೂ ಬಂದರೆ ಅದಕ್ಕೆ ಈ ಆಧ್ಯಾತ್ಮಿಕ ಸಂದರ್ಭವಿದೆ. ಮೂರ್ತಿಪೂಜೆಯನ್ನು ಪಾಪ ಎಂಬಂತೇ ನೋಡುವುದು ಭಾರತೀಯ ಆಧ್ಯಾತ್ಮಿಕ ದೃಷ್ಟಿ ಅಲ್ಲ. ಅಂದರೆ, ಮೂರ್ತಿಪೂಜೆಯನ್ನು ಅಲ್ಲಗಳೆಯುವ ಹಾಗೂ ನಿರಾಕರಿಸುವ ಆಧುನಿಕರು ಸಾಂಪ್ರದಾಯಿಕ ಅರ್ಥದಲ್ಲಿ ಆಸ್ತಿಕರೂ ಅಲ್ಲ, ನಾಸ್ತಿಕರೂ ಅಲ್ಲ.
ಮೂರ್ತಿಪೂಜೆಯ ಈ ಭಾರತೀಯ ಸಂದರ್ಭವು ಆಧುನಿಕ ವಿದ್ಯಾವಂತರನೇಕರಲ್ಲಿ ಕಳಚಿಹೋಗಿದೆ ಎಂಬುದು ಅವರ ನಿರಾಕರಣೆಯ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅಂದರೆ ಆಧುನಿಕ ವಿದ್ಯಾಭ್ಯಾಸ ಮಾಡಿದವರಿಗೆ ಹಾಗೂ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಸರಿಯಾಗಿ ಅರಿತುಕೊಳ್ಳುವ ಕುತೂಹಲ ಇಲ್ಲದವರಿಗೆ ನಮ್ಮ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯನ್ನು ಯಾವ ನಿರ್ದಿಷ್ಟ ಕಾರಣಕ್ಕಾಗಿ ಟೀಕಿಸುತ್ತಾರೆ ಎಂಬ ತಿಳಿವಳಿಕೆ ಹೊರಟುಹೋಗಿದೆ. ಅವರಿಗಿರುವುದು ಒಂದೇ ತಿಳಿವಳಿಕೆ, ಆಧುನಿಕ ವಿದ್ಯಾಭ್ಯಾಸವು ಕಟ್ಟಿಕೊಡುವ ತಿಳಿವಳಿಕೆಯಾಗಿದೆ. ಅಂದರೆ ಮೂರ್ತಿಪೂಜೆ ಎಂದರೆ ಐಡೋಲೇಟ್ರಿ ಹಾಗೂ ಅನೈತಿಕ, ಅದು ನಾಶಮಾಡಬೇಕಾದ ಆಚರಣೆ. ಈ ನಿರ್ದಿಷ್ಟ ಧೋರಣೆಯು ಸೆಮೆಟಿಕ್ ರಿಲಿಜನ್ನುಗಳ, ಅದರಲ್ಲೂ ಪ್ರಮುಖವಾಗಿ ಪ್ರೊಟೆಸ್ಟಾಂಟ್ ಥಿಯಾಲಜಿಯ ಧೋರಣೆಯಾಗಿದೆ. ಹಾಗೂ ದೇವರೇ ಇಲ್ಲ ಎಂಬ ಧೋರಣೆಯ ಭಾಗವಾಗಿ ಮೂರ್ತಿಪೂಜೆಯನ್ನು ವಿರೋಧಿಸುವವರು ನಿರ್ದಿಷ್ಟವಾಗಿ ಪಾಶ್ಚಾತ್ಯ ಅಥೇಯಿಸ್ಟ್ ಪರಂಪರೆಗೆ ಸೇರುತ್ತಾರೆ. ಭಾರತೀಯ ನಾಸ್ತಿಕ ಸಂಪ್ರದಾಯಕ್ಕಲ್ಲ. ಏಕೆಂದರೆ ಪಶ್ಚಿಮದಲ್ಲಿ ಗಾಡ್ ಇಲ್ಲ ಎಂಬುದೊಂದು ಸೆಕ್ಯುಲರ್ ಚಳವಳಿಯೇ ನಡೆದಿದೆ. ಅದನ್ನು ನಾವು ವಿದ್ಯಾವಂತರು ಬಳುವಳಿಯಾಗಿ ಪಡೆದುಕೊಂಡಿದ್ದೇವೆ. ಹಾಗಾಗಿ ಈ ಮೇಲಿನ ಎರಡೂ ಪ್ರಕಾರದ ಮೂರ್ತಿಪೂಜೆಯ ವಿರೋಧಿಗಳಿಗೂ ಭಾರತೀಯ ಆಸ್ತಿಕ-ನಾಸ್ತಿಕ ಸಂಪ್ರದಾಯಗಳಿಗೂ ಯಾವುದೇ ಸಂಬಂಧವಿಲ್ಲ.
ಪ್ರೊಟೆಸ್ಟಾಂಟರೇಕೆ ಮೂರ್ತಿಪೂಜೆಯನ್ನು ತೊಡೆಯಬೇಕೆಂದು ಪಣತೊಟ್ಟರು? ಏಕೆಂದರೆ, ಅದು ಸುಳ್ಳು ರಿಲಿಜನ್ನಿನ ಪ್ರತೀಕವಾಗಿದೆ. ಈ ಧೋರಣೆ ಇಸ್ಲಾಂನಲ್ಲೂ ಇದೆ. ಮೂರ್ತಿ ಸೈತಾನ ಅಥವಾ ಡೆವಿಲ್ಲನ ಪ್ರತಿರೂಪವಾಗಿದೆ. ಅದನ್ನು ಪೂಜಿಸಿದ ತಕ್ಷಣ ನೀವು ಗಾಡ್ನಿಂದ ದೂರವಾಗಿ ಶೈತಾನನ ವಶವಾಗುತ್ತೀರಿ. ಶೈತಾನನ ಪ್ರಭಾವದಿಂದ ನಿಮ್ಮ ತಲೆ ಕೆಟ್ಟುಹೋಗುತ್ತದೆ. ಅನೈತಿಕತೆ, ಅನಾಚಾರಗಳ ಪೃವೃತ್ತಿ ನಿಮ್ಮೊಳಗೆ ನುಸುಳುತ್ತದೆ. ಸುಳ್ಳು ಹೇಳುವುದು, ಮೋಸಮಾಡುವುದು, ಭ್ರಷ್ಟತೆ, ಲೈಂಗಿಕ ವಿಕಾರಗಳು, ಕೆಟ್ಟ ಹವ್ಯಾಸಗಳು ಎಲ್ಲವೂ ನಿಮ್ಮನ್ನು ಅಂಟಿಕೊಳ್ಳುತ್ತವೆ. ನೀವು ಗಾಡ್ನ ಆಜ್ಞೆಯನ್ನು ಧಿಕ್ಕರಿಸಿ ನಡೆಯುತ್ತೀರಿ. ಗಾಡ್ನ ಆಜ್ಞೆಯೇ ನೀತಿ ನಿಯಮವಾಗಿರುವುದರಿಂದ ನೀವು ಅನೀತಿವಂತರಾಗುತ್ತೀರಿ. ಹಾಗಾಗಿ ಡೆವಿಲ್ ಅಥವಾ ಶೈತಾನ ಎಂಬ ಕಲ್ಪನೆಗೂ ಮೂರ್ತಿಪೂಜೆಗೂ ಸಂಬಂಧವಿರುವುದರಿಂದ ಅದು ಪಾಪವೆಂಬುದಾಗಿ ಸೆಮೆಟಿಕ್ ರಿಲಿಜನ್ನುಗಳು ಧಿಕ್ಕರಿಸುತ್ತವೆ. ಎಲ್ಲೆಲ್ಲಿ ಮೂರ್ತಿಪೂಜೆ ಕಾಣುತ್ತದೆಯೋ ಅಲ್ಲಿ ಶೈತಾನನ ಉಪಸ್ಥಿತಿಯಿದೆ ಎಂಬುದಾಗಿ ನಂಬುವ ಈ ಮತಗಳು ಅಂಥ ಮೂರ್ತಿಗಳನ್ನು ಭಂಜಿಸಿ, ಅಥವಾ ಅಪವಿತ್ರಗೊಳಿಸಿ ಅದನ್ನು ನಂಬಿದವರನ್ನು ನಿಜವಾದ ಗಾಡ್ನ ದಾರಿಗೆ ಹಚ್ಚಲು ಪ್ರಯತ್ನಿಸಿದ ನಿದರ್ಶನಗಳೂ ಇತಿಹಾಸದಲ್ಲಿ ಇವೆ.
ಮೂರ್ತಿಪೂಜೆ ಮೌಢ್ಯ ಎಂದು ನಿದರ್ಶನ ಮಾಡುವ ಪ್ರಯತ್ನಗಳೆಲ್ಲವೂ ಈ ರೀತಿಯಾಗಿ ಕ್ರೈಸ್ತ, ಇಸ್ಲಾಮಿಕ್ ಅಥವಾ ಸೆಕ್ಯುಲರ್ ಆಚರಣೆಗಳು, ನಮ್ಮ ಭಾರತೀಯರು ಹೇಗೆ ಈ ಪರಕೀಯ ಆಚರಣೆಯನ್ನೇ ನೈತಿಕ ಆಚರಣೆ ಎಂದು ನಂಬಲು ಸಾಧ್ಯ? ಇದೊಂದು ವಿಚಿತ್ರವಾದರೂ ನಿಜ. ಅದಕ್ಕೆ ಹತ್ತೊಂಭತ್ತನೆಯ ಶತಮಾನದಿಂದಲೂ ಇಲ್ಲಿ ನಡೆದ ಸುಧಾರಣಾ ಚಳವಳಿಗಳ ಹಿನ್ನೆಲೆಯಿದೆ. ಭಾರತೀಯ ಧಾರ್ಮಿಕ ಸುಧಾರಣಾವಾದಿಗಳು ಪ್ರೊಟೆಸ್ಟಾಂಟ್ ಥಿಯಾಲಜಿಯನ್ನೇ ಸತ್ಯವೆಂದು ನಂಬಿ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅದರ ಮೂಲಕ ಒರೆಗೆ ಹಚ್ಚಿದರು. ಆಗ ನಿರಾಕಾರೋಪಾಸನೆಯೇ ಸತ್ಯವಾದುದು, ಸಾಕಾರೋಪಾಸನೆ ಒಂದು ತಪ್ಪು ಬೆಳವಣಿಗೆ, ಹಿಂದೂಯಿಸಂ ಎಂಬುದು ಬ್ರಾಹ್ಮಣ ಪ್ರೀಸ್ಟ್ ಗಳಿಂದ ಭ್ರಷ್ಟಗೊಂಡು ಇಂಥ ಆಚರಣೆಗಳು ಪ್ರಚಲಿತದಲ್ಲಿ ಬಂದಿವೆ ಎಂಬುದಾಗಿ ಅವರು ನಿರೂಪಿಸಿದರು. ಅಂದರೆ ಕ್ಯಾಥೋಲಿಕರ ಕುರಿತ ಪ್ರೊಟೆಸ್ಟಾಂಟ್ ಕಥೆಯನ್ನು ಅವರು ಬಳಸಿಕೊಂಡರು. ಅದಕ್ಕೆ ಪೂರಕವಾಗಿ ಅವರಿಗೆ ಮೂರ್ತಿಪೂಜೆಯ ಕುರಿತು ನಮ್ಮ ಆಧ್ಯಾತ್ಮ ಪಂಥಗಳ ಟೀಕೆಗಳು ಆಧಾರವಾಗಿ ಬಂದವು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಎಷ್ಟೆಷ್ಟು ಪ್ರೊಟೆಸ್ಟಾಂಟ್ಗೊಳಿಸುತ್ತೀರೋ ಅಷ್ಟಷ್ಟು ಅದು ಶುದ್ಧವಾಗುತ್ತದೆ ಎಂದು ಸುಧಾರಣಾವಾದಿಗಳು ತಿಳಿದರು. ಈ ಪ್ರಯತ್ನದಲ್ಲಿ ಆಧ್ಯಾತ್ಮ ಸಂಪ್ರದಾಯಗಳು ನಿಜವಾಗಿಯೂ ಮೂರ್ತಿಪೂಜೆಯ ಬಗೆಗೆ ಏನು ಧೋರಣೆ ಇಟ್ಟುಕೊಂಡಿವೆ ಎಂಬುದರ ಕುರಿತು ಒಂದು ಮರೆವು ವಿದ್ಯಾವಂತರನ್ನು ಆವರಿಸತೊಡಗಿತು. ಬದಲಾಗಿ ಪ್ರೊಟೆಸ್ಟಾಂಟ್ ಧೋರಣೆಯೇ ಅವುಗಳ ಧೋರಣೆ ಎಂಬ ತಪ್ಪು ಅಭಿಪ್ರಾಯವು ಅವರನ್ನು ಆವರಿಸಿಕೊಂಡಿತು.
ಹತ್ತೊಂಭತ್ತನೆಯ ಶತಮಾನದ ನಂತರ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅಧ್ಯಯನಕ್ಕೊಳಪಡಿಸಿದ ವಿದ್ವಾಂಸರು ನಿರಾಕಾರೋಪಾಸನೆಯೇ ಅದರ ಹೆಚ್ಚುಗಾರಿಕೆ ಎಂಬಂತೆ ಬಿಂಬಿಸುವುದರಲ್ಲಿ ಆಸಕ್ತಿ ತೋರಿಸಿದರು. ಆ ಸಂದರ್ಭದಲ್ಲಿ ನಿರಾಕಾರ ಬ್ರಹ್ಮವೊಂದೇ ಸತ್ಯವೆಂದೆನ್ನುವ ಅದೈತ ವೇದಾಂತವು ಮಹತ್ವ ಪಡೆಯಿತು. ಹಾಗೂ ಅದು ಭಾರತದ ಸತ್ಯವಾದ ರಿಲಿಜನ್ನಿನ ವಕ್ತಾರನಾಯಿತು. ಜೊತೆಗೆ ಮಧ್ಯಕಾಲೀನ ನಿರ್ಗುಣ ಭಕ್ತಿ ಸಂಪ್ರದಾಯಗಳು ಕೂಡ ಮಹತ್ವ ಪಡೆದವು. ಅವನ್ನು ಸುಧಾರಣಾ ಚಳವಳಿಗಳು ಎಂಬುದಾಗಿ ಕರೆಯಲಾಯಿತು. ಇದೇ ದೇವತೆಗಳಿಗೆ ಸಂಬಂಧಿಸಿದ ಆಗಮ ಸಂಪ್ರದಾಯಗಳು ಖಂಡನೆಗೆ ಒಳಗಾದವು. ದೇವಾಲಯ ಹಾಗೂ ಮೂರ್ತಿಪೂಜೆಗಳು ಹಿಂದೂಯಿಸಂನ ಅವನತಿಯ ಸಂಕೇತಗಳು ಎಂಬುದಾಗಿ ವಿದ್ವಾಂಸರು ಭಾವಿಸಿದರು. ಮೂರ್ತಿಪೂಜೆಗೂ ಬ್ರಾಹ್ಮಣ ಮರೋಹಿತಶಾಹಿಗೂ, ಜಾತಿ ವ್ಯವಸ್ಥೆಗೂ, ಹಿಂದೂಯಿಸಂನ ಅವನತಿಗೂ ಕೊಂಡಿ ಬೆಳೆಯಿತು. ಈ ಕೊಂಡಿ ಏಕೆ ಬೆಳೆಯಿತೆಂದರೆ, ಪ್ರೊಟೆಸ್ಟಾಂಟರು ಕ್ಯಾಥೋಲಿಕರಲ್ಲಿ ಈ ಕೊಂಡಿಯನ್ನು ಗುರುತಿಸಿ ಖಂಡಿಸಿದ್ದರು. ಕ್ಯಾಥೋಲಿಕ್ ಪ್ರೀಸ್ಟ್ಗಳ ಐಡೋಲೇಟ್ರಿಯಿಂದಾಗಿ ಅವರಲ್ಲಿ ಅನೈತಿಕತೆಯು ಬೆಳೆದು ಕ್ರೈಸ್ತರಲ್ಲಿ ತರತಮದ ಶ್ರೇಣೀಕರಣವನ್ನು ಬೆಳೆಸಿದರು, ಅದು ಕ್ರಿಶ್ಚಿಯಾನಿಟಿಯ ಅವನತಿಗೆ ಕಾರಣವಾಯಿತು. ಎಂಬ ಕಥೆಯೇ ಈ ಕೊಂಡಿಯನ್ನು ರಚಿಸುತ್ತದೆ.
ಭಾರತದಲ್ಲಿ ಈ ಕೊಂಡಿ ನಿಜವಾಗಿಯೂ ಇದೆಯೆ ಎಂಬುದನ್ನು ಯಾರೂ ಪರೀಕ್ಷಿಸಲಿಲ್ಲ. ಆದರೆ ಒಂದು ಹುಸಿ ಇತಿಹಾಸವನ್ನು ಸೃಷ್ಟಿಸಿಕೊಂಡು ಅದರ ಇರುವಿಕೆಗೆ ಆಧಾರವನ್ನು ಕಟ್ಟಿಕೊಂಡರು. ಅಂದರೆ ಅದೇ ದೇವತೆಯನ್ನು ಪೂಜಿಸುವವರಲ್ಲೇ ಒಂದು ವರ್ಗವನ್ನು ಪುರೋಹಿತಶಾಹಿ ಎಂದು ಪರಿಗಣಿಸಿ ಮತ್ತೊಂದನ್ನು ಸುಧಾರಣಾವಾದಿಗಳು ಎಂಬುದಾಗಿ ಭಾವಿಸುವ ಅಧ್ಯಯನಗಳು ನಡೆದವು. ಈ ಭರಾಟೆಯಲ್ಲಿ ಈ ಸಂಪ್ರದಾಯಗಳು ನಿಜವಾಗಿಯೂ ಮೂರ್ತಿಪೂಜೆಯ ಕುರಿತು ಯಾವ ಧೋರಣೆ ಇಟ್ಟುಕೊಂಡಿದ್ದವು ಎಂಬುದು ಮರೆವಿಗೆ ಸರಿಯಿತು. ಇವೆರಡೂ ರಿಲಿಜನ್ನುಗಳಂತೇ ಪರಸ್ಪರ ವಿರುದ್ಧವಾದ ವೈರಿ ಪಂಥಗಳೋ ಎಂಬಂತೇ ಬಿಂಬಿಸಲಾಯಿತು. ಉದಾಹರಣೆಗೆ ಆಗಮಿಕ ಶೈವರು ಹಾಗೂ ಕನ್ನಡ ಶಿವಶರಣ ದೃಷ್ಟಿಕೋನ, ಶಿವಶರಣರು ಪ್ರೊಟೆಸ್ಟಾಂಟ್ ರಿಲಿಜನ್ನು, ವೀರಶೈವರು ಕ್ಯಾಥೋಲಿಕ್ ರಿಲಿಜನ್ನು ಎಂಬ ಸಮೀಕರಣಗಳು ಬೆಳೆದ ನಂತರ ಶಿವಶರಣರ ಟೀಕೆಗಳಿಗೆ ಹೊಸ ಅರ್ಥಗಳು ಬಂದವು.
ಮೂರ್ತಿಗಳ ಹಾಗೂ ಪೌರಾಣಿಕ ದೇವತೆಗಳ ಆಕೃತಿ ಹಾಗೂ ಕಥೆಗಳನ್ನು ವ್ಯಾವಹಾರಿಕ ಸತ್ಯದ ನೆಲೆಯಲ್ಲಿ ಸುಳ್ಳು ಎಂದು ಮನದಟ್ಟು ಮಾಡುವುದು ಸುಲಭ. ಮನುಷ್ಯ ದೇಹಕ್ಕೆ ನಾಲ್ಕು ಕೈಗಳು, ನಾಲ್ಕು ತಲೆ ಇತ್ಯಾದಿಗಳನ್ನು ಸೇರಿಸುವುದು, ದೇವತೆಗಳ ಪವಾಡಗಳು, ಮಾಯೆ, ಇವುಗಳ ಕುರಿತು ಸತ್ಯ ಸುಳ್ಳಿನ ಪರಿಭಾಷೆಯಲ್ಲಿ ಮಾತನಾಡಿದಾಗ ಯಾರಿಗಾದರೂ ಅದು ತರ್ಕಬದ್ಧವಾಗಿ ತೋರುತ್ತದೆ. ಹಾಗಾಗಿ ಈ ತರ್ಕವನ್ನೇ ಇಟ್ಟುಕೊಂಡು ಅವು ಸುಳ್ಳು ಎಂದು ಅದರ ವಿರೋಧಿಗಳು ತಾವೇನೋ ಅದ್ಭುತವಾದದ್ದನ್ನು ತಿಳಿಸುತ್ತಿದ್ದೇವೆಂಬುದಾಗಿ ತಿಳಿದಿದ್ದಾರೆ. ಹಿಂದೊಮ್ಮೆ ಕ್ರೈಸ್ತ ಮಿಶನರಿಗಳು ಇದೇ ಕೆಲಸವನ್ನು ಮಾಡಿದ್ದರು. ಏಕೆಂದರೆ ಅವರಿಗೆ ನಮ್ಮ ದೇವತೆಗಳು ಸುಳ್ಳು ದೇವತೆಗಳಾಗಿ ಕಂಡಿದ್ದರು. ಅದನ್ನು ನಮಗೆ ಮನದಟ್ಟು ಮಾಡಿಬಿಟ್ಟರೆ ನಾವೆಲ್ಲರೂ ಸತ್ಯದೇವನ ರಿಲಿಜನ್ನಿಗೆ ಪರಿವರ್ತನೆ’ ಆಗಿಬಿಡುತ್ತೇವೆ ಎಂಬುದಾಗಿ ಅವರು ತಿಳಿದಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಏಕೆಂದರೆ ಭಾರತೀಯರು ಕೂಡ ದೇವತಾ ಮೂರ್ತಿಗಳನ್ನು ನಿಜ ವ್ಯಕ್ತಿ ಹಾಗೂ ಘಟನೆಗಳೆಂದುಕೊಂಡಿರಲಿಲ್ಲ. ಆದರೂ ಅವು ತಮ್ಮ ಜೀವನಕ್ಕೆ ಅತ್ಯಗತ್ಯ ಎಂದುಕೊಂಡಿದ್ದರು. ಅಧ್ಯಾತ್ಮ ಸಂಪ್ರದಾಯಗಳು ಈ ಆಕೃತಿ ಹಾಗೂ ಕಡೆಗಳಿಗೆಲ್ಲ ಬೇರೆ ಯಾವುದೋ ಪಾತಳಿಯಲ್ಲಿ ಅರ್ಥ ಕಲ್ಪಿಸಿ ತಮ್ಮ ಸಾಧನೆಗೆ ಅವುಗಳನ್ನು ವಸ್ತುಗಳನ್ನಾಗಿ ಒಗ್ಗಿಸಿಕೊಂಡಿದ್ದವು. ಉದಾಹರಣೆಗೆ ಬೃಹದಾರಣ್ಯಕೋಪನಿಷತ್ತಿನ ಭಾಷ್ಯದಲ್ಲಿ ಶಂಕರರು ‘ಈ ದೇವ ಅಸುರ ಇವೆಲ್ಲ ವಾಸ್ತವಿಕ ವ್ಯಕ್ತಿಗಳಲ್ಲ ಹಾಗೂ ಘಟನೆಗಳಲ್ಲ. ಅವು ಅವಿದ್ಯೆಯನ್ನು ಕಳೆದುಕೊಂಡು ಆತ್ಮಜ್ಞಾನವನ್ನು ಸಾಧಿಸಲು ಇರುವ ಮಾರ್ಗಗಳು’ ಎಂಬ ನಿರೂಪಣೆಯನ್ನು ಮಾಡುತ್ತಾರೆ. ದೇವರಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕನ್ನಡದ ಸಾಹಿತಿಗಳಾದ ಪುತಿನ ಅವರ ಸುಪ್ರಸಿದ್ಧ ಹೇಳಿಕೆ ಇದೆ. ‘ದೇವರು ಇಲ್ಲ. ಅದಕ್ಕಾಗೇ ಒಬ್ಬನನ್ನು ಕಲ್ಪಿಸಿಕೊಳ್ಳಬೇಕಪ್ಪಾ, ಮೂರ್ತಿಪೂಜೆ ಹಾಗೂ ಪವಾಡಗಳು ಸುಳ್ಳು ಎಂದು ಸಾಧಿಸುವವರು ಈ ಸಂಪ್ರದಾಯಗಳ ಎದುರು ಅವಿವೇಕಿಗಳಾಗಿ, ಮೂರ್ಖರಾಗಿ ಕಾಣಿಸದೇ ಮತ್ತೇನು? ಈ ಸಂಪ್ರದಾಯಗಳಿಗೆ ನಿಜವಾಗಿಯೂ ಅವರು ತೋರಿಸಬೇಕಾದದ್ದು ಮೂರ್ತಿಗಳು ಸುಳ್ಳು ಎಂಬುದನ್ನೆಲ್ಲ ಅದನ್ನು ನೂರಾರು ವರ್ಷಗಳಿಂದ ಕ್ರೈಸ್ತ ಮಿಶನರಿಗಳು ಮಾಡಿ ಸೋತಿದ್ದಾರೆ. ಬದಲಾಗಿ ಭಾರತೀಯ ಆಧ್ಯಾತ್ಮ ಸಂಪ್ರದಾಯಗಳ ಸಂದರ್ಭದಲ್ಲಿ ಅವರು ತೋರಿಸಬೇಕಾದದ್ದು ಮೂರ್ತಿಪೂಜೆಯು ತತ್ವಜ್ಞಾನಕ್ಕೆ ಸಾಧನವಲ್ಲ. ಅಥವಾ ಅಧ್ಯಾತ್ಮ ಸಾಧನೆಯಲ್ಲಿ ದಾರಿತಪ್ಪಿಸುವ ಸಲುವಾಗಿ ಮೂರ್ತಿಪೂಜೆಯ ಸೃಷ್ಟಿಯಾಗಿದೆ ಎಂಬುದನ್ನು. ಆದರೆ ಅದನ್ನು ತೋರಿಸಲು ಸಾಧ್ಯವೆ?