ಒಂದೆಡೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವೈಯಕ್ತಿಕ ಕಾನೂನಿನ ವಿಷಯದಲ್ಲಿ ಸಾರ್ವತ್ರಿಕ ವೈಚಾರಿಕ ಸೆಕ್ಯುಲರ್ ಕಾನೂನುಗಳನ್ನು ಮಾಡುವ ಯಾವ ಅವಕಾಶವನ್ನು ಮುಸ್ಲಿಂ ಸಂಘಟನೆಗಳು ಮತ್ತು ಸೆಕ್ಯುಲರ್ವಾದಿಗಳು ಪ್ರಭುತ್ವಕ್ಕೆ ನೀಡಲಿಲ್ಲ, ಅಥವಾ ಪ್ರಭುತ್ವವೇ ಮಾಡಲಿಲ್ಲ. ಮತ್ತೊಂದೆಡೆ ಬಹುಸಂಖ್ಯಾತ ಹಿಂದೂಗಳ ನಂಬಿಕೆ ಆಚರಣೆಗಳೂ ಸೇರಿದಂತೆ ಅವರ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಸುಧಾರಣ ಕಾಯ್ದೆಗಳ ಮೇಲೆ ಕಾಯ್ದೆಗಳನ್ನು ಸೆಕ್ಯುಲರ್ ಪ್ರಭುತ್ವ ಮಾಡುತ್ತಲೇ ಬರುತ್ತಿದೆ.
ಭಾರತೀಯ ಸಂವಿಧಾನದ ಪ್ರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಹಾಗೂ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದವರ ಏಳಿಗೆಗಾಗಿ ವಿಶೇಷ ಅವಕಾಶಗಳನ್ನು ನೀಡುವ ಸಂದರ್ಭವನ್ನು ಹೊರತುಪಡಿಸಿ ಯಾವುದೇ ನಾಗರೀಕನನ್ನು ಆತನ ರಿಲಿಜನ್ನು ಮತ್ತು ಜಾತಿಯ ಆಧಾರದಲ್ಲಿ ಪ್ರಭುತ್ವ ತಾರತಮ್ಯ ಮಾಡುವಂತಿಲ್ಲ. ಈ ವಿಶೇಷ ಅವಕಾಶಗಳ ಕುರಿತು ಸಾಕಷ್ಟು ವಾದವಿವಾದಗಳಾಗಿದ್ದರೂ ಸಹ ಅವು ರಿಲಿಜನ್ನಿನ ಆಧಾರದಲ್ಲಿ ಸಮಾನತೆಗೆ ವಿರುದ್ದ ಎನ್ನುವ ರೂಪವೇನು ಪಡೆದಿಲ್ಲ. ಪರಿಶಿಷ್ಟಜಾತಿಯ ಅವಕಾಶಗಳನ್ನು ಪಡೆಯುವ ಸಂದರ್ಭದಲ್ಲಿ ಮಾತ್ರವೇ ವ್ಯಕ್ತಿ ಹಿಂದೂ ಅಥವ ಸಿಖ್ ಆಗಿರಬೇಕೆಂಬ ನಿಬಂಧನೆ ಇದೆ. ಇದರ ಹೊರತಾಗಿ ರಾಜ್ಯ ನಿರ್ದೇಶಕ ತತ್ವದಡಿಯಲ್ಲಿ ಏಕರೂಪ ನಾಗರೀಕ ಸಂಹಿತೆಯ ಜಾರಿಗೆ ಪ್ರಭುತ್ವವು ಬದ್ದವಾಗಿರಬೇಕಿದೆ. ಆದರೆ ಮುಸ್ಲಿಮರು ತಮ್ಮ ವೈಯಕ್ತಿಕ ಕಾನೂನನ್ನು ಅನುಸರಿಸುವ ರಿಲಿಜನ್ನಿನ ಸ್ವಾತಂತ್ರ್ಯ ಎನ್ನುವ ಸೆಕ್ಯುಲರ್ ತತ್ವದಡಿ ಏಕರೂಪ ನಾಗರೀಕ ಸಂಹಿತೆಗೆ ಮುಸ್ಲಿಂ ಸಂಘಟನೆಗಳು ಮತ್ತು ಎಡಪಂಥೀಯ ಸೆಕ್ಯುಲರ್ ಚಿಂತಕರು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಕೇವಲ ಹಿಂದೂ ಸಮುದಾಯಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನಿನ ವಿಷಯದಲ್ಲಿ ಅವರ ಆಚರಣೆಗಳನ್ನು ಮಾನ್ಯಮಾಡದೆ ಪ್ರಭುತ್ವವು ತನ್ನದೇ ವೈಯಕ್ತಿಕ ಕಾನೂನುಗಳನ್ನು ಹೇರುತ್ತಿದೆ. ಇದು ಅದೇ ಸೆಕ್ಯುಲರ್ವಾದದ ರಿಲಿಜನ್ನಿನ ಸ್ವಾತಂತ್ರ್ಯದ ಧಕ್ಕೆ ಮತ್ತು ಹಿಂದೂಗಳ ವಿಷಯದಲ್ಲಿ ಮಾತ್ರವೇ ಕಾನೂನುಗಳನ್ನು ಮಾಡುತ್ತಾ, ಮುಸ್ಲಿಮರಿಗೆ ಅವರದ್ದೆ ವೈಯಕ್ತಿಕ ಷರಿಯಾ ಕಾನೂನುಗಳನ್ನು ಶಾಸನಬದದ್ಧವಾಗಿ ಪ್ರಭುತ್ವವು ಮಾನ್ಯ ಮಾಡುತ್ತಾ ಬರುತ್ತಿರುವುದು ಸೆಕ್ಯುಲರ್ವಾದದ ಇತರೆ ತತ್ವಗಳಾದ ರಿಲಿಜನ್ನಿನ ಸಮಾನತೆ, ರಿಲಿಜನ್ನಿನ ಸಹಿಷ್ಣತೆಯ ತತ್ವಕ್ಕೆ ವಿರುದ್ದವಾಗಿದೆ ಎನ್ನುವ ವಾದಗಳನ್ನು ಹಿಂದೂಸಂಘಟನೆಗಳು ಮುಂದಿಡುತ್ತಿವೆ. ಹೀಗೆ ಸೆಕ್ಯುಲರ್ವಾದದ ಎಲ್ಲಾ ತತ್ವಗಳಡಿ ಮುಸ್ಲಿಮರ ರಿಲಿಜನ್ನಿನ ಆಚರಣೆಗಳನ್ನು ಮಾತ್ರವೇ ರಕ್ಷಿಸುತ್ತಾ, ಹಿಂದೂಗಳ ವಿಷಯದಲ್ಲಿ ಈ ಎಲ್ಲಾ ತತ್ವಗಳನ್ನು ಗಾಳಿಗೆ ತೂರುತ್ತಿರುವುದರಿಂದ ಭಾರತೀಯ ಸೆಕ್ಯುಲರ್ ಪ್ರಭುತ್ವ ಮತ್ತು ಸೆಕ್ಯುಲರ್ವಾದಿ ಚಿಂತಕರು ಸೂಡೋ ಸೆಕ್ಯುಲರ್ಗಳಾಗಿದ್ದಾರೆ ಎನ್ನುವ ಆರೋಪವನ್ನು ಕೂಡ ಮಾಡಲಾಗುತ್ತಿದೆ.
ರಿಲಿಜನ್ನಿನ ಅರ್ಥವಿವರಣೆ ಏನೇ ಇರಲಿ, ಹಿಂದೂಗಳು ಮತ್ತು ಮುಸ್ಲಿಮರ ಆಚರಣೆಗಳಿಗೆ ಸಂಬಂಧಿಸಿದಂತೆ ಸೆಕ್ಯುಲರ್ ಪ್ರಭುತ್ವವು ತನ್ನ ತತ್ವಗಳನ್ನು ಸಮಾನವಾಗಿ ಅನ್ವಯಿಸುತ್ತಿಲ್ಲ ಎನ್ನುವುದಂತೂ ಮೇಲ್ನೋಟಕ್ಕೇ ಕಂಡುಬರುವ ವಾಸ್ತಾವಾಂಶ. ಹಿಂದೂ ಮಹಾಸಭಾ ಮೊದಲಿನಿಂದಲೂ ಹಿಂದೂ ಸುಧಾರಣೆಗಳ ಹೆಸರಿನ ಈ ಬಗೆಯ ಪಕ್ಷಪಾತದ ವಿರುದ್ದ ಟೀಕಿಸುತ್ತಲೇ ಬಂದಿದೆ. ಅಷ್ಟೇ ಅಲ್ಲ ಜೆ.ಬಿ. ಕೃಪಲಾನಿಯಂತಹ ಸಮಾಜವಾದಿ ನಾಯಕರೂ ಸಹ ಪ್ರಭುತ್ವದ ಈ ಪಕ್ಷಪಾತಿ ನೀತಿಯನ್ನು ಕಟುವಾದ ಶಬ್ದಗಳಲ್ಲಿಯೇ ಟೀಕಿಸಿದ್ದಾರೆ “ನಿಜವಾಗಿಯೂ ನಮ್ಮದು ಪ್ರಜಾಸತ್ತಾತ್ಮಕ ಪ್ರಭುತ್ವೇ ಆಗಿದ್ದರೆ ಕೇವಲ ಒಂದು ಸಮುದಾಯಕ್ಕೆ ಮಾತ್ರವೇ ಸೀಮಿತವಾಗಿ ಕಾನೂನುಗಳನ್ನು ಮಾಡಬಾರದು… ಹಾಗೆ ಮಾಡಿದರೆ ಮಹಸಭಾ ಮಾತ್ರವೇ ಕೋಮುವಾದಿಯಾಗುವುದಿಲ್ಲ… ಸರ್ಕಾರವೂ ಸಹ ಕೋಮುವಾದಿಯೇ ಆಗುತ್ತದೆ. ಒಂದೊಮ್ಮೆ ಸಂಸತ್ತಿನ ಸದಸ್ಯರು ತಮ್ಮ ಸುಧಾರಣಾವಾದೀ ಗೀಳಿಗೆ ಹಿಂದೂ ಸಮುದಾಯವೊಂದನ್ನು ಮಾತ್ರ ಗುರಿಯಾಗಿಸಿಕೊಂಡರೆ ಅವರು ಹಿಂದೂ ಸಮುದಾಯದ ಒಳಿತಿನ ಬಗ್ಗೆ ಮಾತ್ರವೆ ಆಸಕ್ತಿಹೊಂದಿದ್ದಾರೆ, ಮುಸ್ಲಿಂ ಮತ್ತ ಕ್ರಿಶ್ಚಿಯನ್ ಸಮುದಾಯದ ಒಳಿತಿನ ಬಗ್ಗೆ ಅಸಡ್ಡೆ ಹೊಂದಿರುವ ಕೋಮುವಾದಿಗಳು ಎನ್ನುವ ಆರೋಪವನ್ನು ಎದುರಿಸಬೇಕಾಗುತ್ತದೆ. ವಿವಾಹ ಮಸೂದೆ ಹಿಂದೂ ಸಮುದಾಯಗಳಿಗೆ ಅನುಕೂಲಕರವೋ, ಅನಾನುಕೂಲಕರವೋ ಎರಡೂ ದೃಷ್ಟಿಯಿಂದಲೂ ಇದು ಕೋಮುವಾದಿ ಮಾಪನವೆಂದೇ ಅನಿಸಿಕೊಳ್ಳುವುದು” ಎನ್ನುತ್ತಾರೆ ಕೃಪಲಾನಿ.
ಆರ್ಥಿಕ ಸಾಮಾಜಿಕ ಅಥವಾ ಇನ್ನಾವುದೇ ರೀತಿಯ ಹಕ್ಕುಗಳ ರಕ್ಷಣೆಗಾಗಿಯೇ ಆದರೂ ಒಂದು ರಿಲಿಜನ್ನಿನಲ್ಲಿ ಮಾತ್ರವೇ ಹಸ್ತಕ್ಷೇಪ ಮಾಡಿ ಉಳಿದವುಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವ ಮಾನದಂಡವೇನು? ಇಲ್ಲಿ ಸ್ಪಷ್ಟವಾಗಿ ಮೊದಲನೇ ತತ್ವವಾದ ರಿಲಿಜನ್ನಿನ ಸ್ವಾತಂತ್ರ್ಯವನ್ನು ಬಹುಸಂಖ್ಯಾತ ಸಮುದಾಯಕ್ಕೆ ಅದನ್ನು ನಿರಾಕರಿಸಿರುವಾಗ ಅದನ್ನು ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರವೇ ನೀಡಲು ಸಾಧ್ಯವಿಲ್ಲ. ವೈಯಕ್ತಿಕ ಕಾನೂನಿನ ಸುಧಾರಣೆಯನ್ನು ಸ್ವೀಕರಿಸುವ ಮಾನಸಿಕ ಸಿದ್ಧತೆ ಚಾರಿತ್ರಿಕವಾಗಿ ಎಲ್ಲಾ ಸಮುದಾಯಗಳಲ್ಲೂ ಸಮಾನವಾಗಿಲ್ಲ ಎನ್ನುವ ವಾದವನ್ನೂ ಮುಂದಿಡಲಾಗುತ್ತದೆ. ಆದರೆ ಎಲ್ಲಾ ಸಮುದಾಯದವರಿಗೂ ಸಮಾನ ನಾಗರೀಕತ್ವವೇ ಅಪೇಕ್ಷಿತ ಎಂದ ಮೇಲೆ ವಸಾಹತು ಕಾಲದಿಂದ ಅನುಸರಿಸುತ್ತಿರುವ ರಿಲಿಜನ್ ಆಧಾರಿತ ವೈಯಕ್ತಿಕ ಕಾನೂನುಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಹಾಗಾಗಿ ಮೊದಲು ರಿಲಿಜನ್ನುಗಳನ್ನಾದರಿಸಿದ ವೈಯಕ್ತಿಕ ಕಾನೂನುಗಳ ಬದಲಿಗೆ ಸಮಾನ ನಾಗರೀಕ ಸಂಹಿತೆಯನ್ನಾದರಿಸಿದ ವೈಯಕ್ತಿಕ ಕಾನೂನನ್ನೇ ತರಬೇಕಾದ ಅಗತ್ಯವನ್ನು ಘೋಷಿಸಬೇಕಾಗುತ್ತದೆ. ನಂತರ ಸಮುದಾಯಗಳ ರಿಲಿಜನ್ನಿನ ಸ್ವಾತಂತ್ರ್ಯದ ಭಾವನೆಯನ್ನು ಗೌರವಿಸುತ್ತಾ, ಸಮುದಾಯಗಳು ಯಾವಾಗ ಒಪ್ಪಿಕೊಳ್ಳಲು ಸಿದ್ದವಾಗುವವೋ ಆಗ ಪ್ರಭುತ್ವ ಸುಧಾರಣೆಯ ಮೂಲಕ ಅದನ್ನು ಜಾರಿಗೊಳಿಸಬಹುದು. ಅದರಂತೆಯೇ ಸಂವಿಧಾನ ರಾಜ್ಯನಿರ್ದೇಶಕ ತತ್ವವು ತನ್ನ ಎಲ್ಲಾ ನಾಗರೀಕರಿಗೂ ಏಕರೂಪ ನಾಗರೀಕ ಸಂಹಿತೆಯ ನೀಡುವುದಾಗಿ ಘೋಷಿಸಿದೆ. ಆದರೆ ಮತ್ತೊಂದೆಡೆ ಅಲ್ಪಸಂಖ್ಯಾತ ಸಮುದಾಯಗಳ ವಕ್ತಾರರು ರಿಲಿಜನ್ನಿನ ಸ್ವಾತಂತ್ರ್ಯಕ್ಕೇ ಅಂಟಿಕೊಂಡು ಪ್ರಭುತ್ವಕ್ಕೆ ರಿಲಿಜನ್ನಿನಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಇದನ್ನೇ ಹಿಂದೂ ಬಲಪಂಥವೂ ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯ ಎಂದು ಹೀಯಾಳಿಸುತ್ತಿದೆ.
ಅಲ್ಪಸಂಖ್ಯಾತ ಸಮುದಾಯಗಳಲ್ಲೂ ಈ ಬಗೆಯ ಸುಧಾರಣೆಗಳು ನಡೆದೇ ಇಲ್ಲವೆಂದಲ್ಲ, ನಡೆದವು. ೨೦ನೇ ಶತಮಾನದ ಆರಂಭದ ಕೆಲವು ದಶಕಗಳಲ್ಲಿ ಭಾರತದ ಹಲವು ಭಾಗಗಳಲ್ಲಿ ಮುಸ್ಲಿಮರ ಸ್ಥಳೀಯ ರೂಡೀಸಂಪ್ರದಾಯಗಳ ಆಚರಣೆಗಳನ್ನು ನಿಲ್ಲಿಸಿ ಅವುಗಳ ಬದಲಿಗೆ ಸಾರ್ವತ್ರಿಕವಾಗಿ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಪಾಲಿಸುವಂತೆ ಮಾಡುವ ಸಂಘಟಿತ ಪ್ರಯತ್ನಗಳು ನಡೆದವು. ಇದನ್ನೊಂದು ಚಳವಳಿಯ ರೂಪದಲ್ಲಿ ಭಾರತದಾದ್ಯಂತ ನಡೆಸಿದ್ದು ರಾಷ್ಟ್ರೀಯ ಕಾಂಗ್ರೆಸ್ನ ನಿಕಟವರ್ತಿ ಸಂಘಟನೆಯೇ ಆಗಿದ್ದ ದಿಯೋಬಂದ್ನ ಜಮಾತ್ ಅಲ್-ಉಲೇಮ-ಇ-ಹಿಂದ್ ಸಂಘಟನೆಯ ನೇತೃತ್ವದಲ್ಲಿ. ದಕ್ಷಿಣ ಭಾರತದಲ್ಲಿನ ಮಾಪಿಳ್ಳಾ ಮುಸ್ಲಿಮರು, ಪಶ್ಚಿಮ ಭಾರತದ ಮೆಮೋನ್ ಮುಸ್ಲಿಮರು, ರಾಜಸ್ಥಾನ ಮತ್ತು ಪಂಜಾಬ್ನಲ್ಲಿದ್ದ ಹಲವು ಮುಸ್ಲಿಂ ಗುಂಪುಗಳಲ್ಲಿ ಚಾಲ್ತಿಯಲ್ಲಿದ್ದ ಸ್ಥಳೀಯ ವಿಶೇಷ ವಿವಾಹ ಮತ್ತು ಉತ್ತರಾಧಿಕಾರತ್ವ ಆಚರಣೆಗಳನ್ನು ನ್ಯಾಯಾಲಯಗಳು ಮಾನ್ಯಮಾಡುತ್ತಿರುವುದರ ವಿರುದ್ದ ಈ ಚಳವಳಿಯನ್ನು ಸಂಘಟಿಸಲಾಗಿತ್ತು. ನ್ಯಾಯಾಲಯಗಳು ಹೀಗೆ ಮುಸ್ಲಿಮರ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಆಚರಣೆಗಳನ್ನು ಅನುಸರಿಸುವುದು ಕೇವಲ ಇಸ್ಲಾಂ ವಿರೋಧಿ ಮಾತ್ರವೇ ಅಲ್ಲದೆ ಅವು ಅತ್ಯಂತ ಹಿಂದುಳಿದವೂ ಮತ್ತು ಬಹುಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ಅಸಮಾನವೂ ಆಗಿವೆ ಎಂದು ವಾದಿಸಲಾಯಿತು. ಮಾಪಿಳ್ಳಾ ಮುಸ್ಲಿಮರ ಉತ್ತರಾಧಿಕಾರತ್ವ ಮಸೂದೆಯ ಪ್ರಸ್ತಾವನೆಯಲ್ಲಿ “ಮೊಹಮಡನ್(ಮುಸ್ಲಿಂ) ಸಮುದಾಯವು ರೂಢಿಪದ್ದತಿಗಳು ಅಸಂಗತವೆಂದು ಭಾವಿಸುತ್ತಿದ್ದು, ಅಸ್ತಿತ್ವದಲ್ಲಿರುವ ಸಂಪ್ರದಾಯಗಳು ತಮ್ಮ ರಿಲಿಜನ್ನು ಮತ್ತು ಸಮುದಾಯಕ್ಕೆ ಅವಮಾನಕರವೆಂದು ನೋಡುತ್ತದೆ” ಎಂದು ಉಲ್ಲೇಖಿಸಲಾಗಿದೆ.
ಮುಸ್ಲಿಂ ಸಂಘಟಣೆಗಳ ಈ ಆಂದೋಲನವು ಹಲವು ಪ್ರಾಂತ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಹಲವಾರು ಹೊಸ ಕಾನೂನುಗಳನ್ನು ರೂಪಿಸುವಂತೆ ಮಾಡಿದವು. ಮಾಪಿಳ್ಳಾ ಉತ್ತರಾಧಿಕಾರತ್ವ ಕಾಯ್ದೆ ೧೯೧೮, ಕುಚ್ಚಿ ಮೆಮೋನ್ಸ್ ಕಾಯ್ದೆ ೧೯೨೦ ಮತ್ತು ೧೯೩೮, NWFP ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಅನುಷ್ಠಾನ ಕಾಯ್ದೆ ೧೯೩೫ (ಈ ಕಾಯ್ದೆಯ ಮೂಲಕ ಪ್ರಥಮ ಬಾರಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಷರಿಯತ್ ಅನ್ನು ಸಮಾನಾರ್ಥಕ ಅಥವ ಸಂವಾದಿಯ ಅರ್ಥದಲ್ಲಿ ಬಳಸಲಾಯಿತು.) ಈ ಸುಧಾರಣೆಗಳ ಮೂಲಕ ಎಲ್ಲೆಡೆ ಮುಸ್ಲಿಮರು ಆಯಾ ಪ್ರದೇಶದ ಸ್ಥಳೀಯ ಸಂಪ್ರದಾಯ ರೂಢಿಪದ್ದತಿಗಳು ತ್ಯಜಿಸಿ ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಷರಿಯಾವನ್ನೇ ಅನುಸರಿಸುವ ಹಾಗೆ ಮಾಡುವ ಪ್ರಯತ್ನಗಳು ನಡೆದವು. ಈ ಆಂದೋಲನದ ಪರಿಣಾಮವಾಗಿ ಕೇಂದ್ರ ಶಾಸಕಾಂಗವು ಸಹ ೧೯೩೭ರಲ್ಲಿ ಷರಿಯಾ ಕಾಯ್ದೆಯನ್ನು ಅನುಷ್ಠಾನಗೊಳಿಸುತ್ತದೆ. ಮಹಮದಾಲಿ ಜಿನ್ನಾರ ಒತ್ತಾಯದ ಮೇರೆಗೆ ಕೇವಲ ಕೆಲವು ಷರಿಯಾ ವಿಧಿಗಳನ್ನು ಮಾತ್ರ ಎಲ್ಲಾ ಮುಸ್ಲಿಂರಿಗೂ ಕಡ್ಡಾಯಗೊಳಿಸಿ ಹಲವನ್ನು ಷರಿಯಾ ಅಥವಾ ಸ್ಥಳೀಯ ಪದ್ದತಿಗಳನ್ನು ಅನುಸರಿಸುವ ಆಯ್ಕೆಗೆ ಬಿಡಲಾಯಿತು.
ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಯಲ್ಲಿ….
ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಸಮಾನ ನಾಗರೀಕ ಸಂಹಿತೆ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರತಿಪಾದನೆಗೋಸ್ಕರ ಸೆಕ್ಯುಲರ್ ಪ್ರಭುತ್ವದಡಿಯಲ್ಲಿ ರಿಲಿಜನ್ನಿನ ಸ್ವಾತಂತ್ರ್ಯಕ್ಕೆ ವಿಶೇಷವಾಗಿ ಒತ್ತುನೀಡಿ ಮಾತನಾಡಿದ ಅಂಶಗಳು ಕಂಡುಬರುತ್ತದೆ. ಮುಸ್ಲಿಂ ಲೀಗ್ನ ಹಲವು ಪ್ರತಿನಿಧಿಗಳು ಮದುವೆ, ವಿಚ್ಚೇದನ, ಮತ್ತು ಕೌಟಂಬಿಕ ನಿರ್ವಹಣೆಯಂತ ವಿಷಯಗಳು ರಿಲಿಜನ್ನಿನ ಅತ್ಯಗತ್ಯ ಅಂಶಗಳಾಗಿರುವುದರಿಂದ ಅವುಗಳನ್ನು ಪ್ರಭುತ್ವದ ಹಸ್ತಕ್ಷೇಪದಿಂದ ಮುಕ್ತವಾಗಿಡಬೇಕು ಎಂದು ವಾದಿಸುತ್ತಾರೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪರವಾದಿಗಳು ರಿಲಿಜನ್ನಿನ ರಾಜಕೀಕರಣ ಕೂಡದೆನ್ನುತ್ತಾರೆ. ಇಲ್ಲಿ ರಿಲಿಜನ್ನು ಮತ್ತು ಪ್ರಭುತ್ವದ ಪ್ರತ್ಯೇಕತೆ ಎಂದರೆ ಸೆಕ್ಯುಲರ್ ವ್ಯವಸ್ಥೆಯಲ್ಲಿ ಸ್ಟೇಟ್ ಹಸ್ತಕ್ಷೇಪದಿಂದ ರಿಲಿಜನ್ನು ಮುಕ್ತವಾಗಿರುವುದೇ ಆಗಿದೆ ಎನ್ನುತ್ತಾರೆ. ಹಾಗಾಗಿ ರಿಲಿಜನ್ನಿನ ವೈಯಕ್ತಿಕ ಕಾನೂನಿನಲ್ಲಿ ಪ್ರಭುತ್ವದ ಹಸ್ತಕ್ಷೇಪ ನ್ಯಾಯಬದ್ದವಲ್ಲ. ಒಂದು ಸೆಕ್ಯುಲರ್ ವ್ಯವಸ್ಥೆ ಎಂದರೆ ಅಲ್ಲಿ ನಾಗರೀಕನಿಗೆ ತನ್ನ ರಿಲಿಜನ್ನಿನ ಬೋಧನೆಯಲ್ಲಿರುವಂತೆ ವೈಯಕ್ತಿಕ ಕಾನೂನಿನಂತೆ ಬದುಕುವ ಸ್ವಾತಂತ್ರ್ಯವೂ ಸೇರಿದಂತೆ ಸಂಪೂರ್ಣವಾದ ರಿಲಿಜನ್ನಿನ ಸ್ವಾತಂತ್ರ್ಯವನ್ನು ನೀಡುವುದೇ ಆಗಿದೆ.
ಸಂವಿಧಾನಾತ್ಮಕ ಚರ್ಚೆಯಲ್ಲಿ ಪಾಲ್ಗೊಂಡು ಮುಸ್ಲಿಂ ವೈಯಕ್ತಿಕ ಕಾನೂನು ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದವರು ಅಂದಿನ ಮುಸ್ಲಿಂಲೀಗ್ನ ಪ್ರತಿನಿಧಿಯಾಗಿದ್ದ ಮಹಮದ್ ಇಸ್ಮಾಯಿಲ್. ಇವರ ಪ್ರಕಾರ “ಒಂದು ಸೆಕ್ಯುಲರ್ ಪ್ರಭುತ್ವದ ಅಡಿಯಲ್ಲಿ ಅದರ ನಾಗರೀಕರೆಲ್ಲರೂ ಅವರ ದೈನಂದಿನ ಜೀವನ, ಅವರ ಭಾಷೆ, ಅವರ ಸಂಸ್ಕೃತಿ, ಅವರ ವೈಯಕ್ತಿಕ ಕಾನೂನುಗಳನ್ನೂ ಒಳಗೊಂಡಂತೆ ಎಲ್ಲರಿಗೂ ಸಾಮಾನ್ಯವಾದ ಕಾನೂನು ಹೊಂದಿರಬೇಕು ಎನ್ನುವಂತೆ ಯೋಚಿಸುತ್ತಿದ್ದಾರೆ. ಆದರೆ ಅದು ಸೆಕ್ಯುಲರ್ ಪ್ರಭುತ್ವವನ್ನು ನೋಡುವ ಸರಿಯಾದ ಕ್ರಮವಲ್ಲ. ಒಂದು ಸೆಕ್ಯುಲರ್ ಪ್ರಭುತ್ವದಲ್ಲಿ ವಿಭಿನ್ನ ಸಮುದಾಯಗಳಿಗೆ ಸೇರಿರುವ ನಾಗರೀಕರಿಗೆ ತಮ್ಮದೇ ಆದ ರಿಲಿಜನನ್ನು ಆಚರಿಸಲು, ತಮ್ಮದೇ ಆದ ಜೀವನವನ್ನು ನಡೆಸಲು ಸ್ವಾತಂತ್ರ್ಯವಿರಬೇಕು ಮತ್ತು ಅವರದ್ದೇ ವೈಯಕ್ತಿಕ ಕಾನೂನನ್ನು ಅವರಿಗೆ ಅನ್ವಯಿಸಬೇಕು”. (ಬಾಜ್ಪೆ, ೧೮೩) ಸಮಾನ ನಾಗರೀಕ ಕಾನೂನುಗಳನ್ನು ಅನುಸರಿಸಬೇಕು ಎನ್ನುವ ಮೂಲಕ ತಮ್ಮ ವೈಯಕ್ತಿಕ ಕಾನೂನುಗಳಿಗೆ ಧಕ್ಕೆ ತರಬಾರದು ಎಂಬುವುದು ಮಹಮದ್ ಇಸ್ಮಾಯಿಲ್ ಮತ್ತು ಇನ್ನಿತರ ಮುಸ್ಲಿಂಲೀಗ್ನ ಪ್ರತಿನಿಧಿಗಳ ವಾದವಾಗಿರುತ್ತದೆ.
ಅವರ ಪ್ರಕಾರ ವೈಯಕ್ತಿಕ ಕಾನೂನುಗಳು ಅವರ ರಿಲಿಜನ್ನಿನ ಮತ್ತು ಸಂಸ್ಕೃತಿಯ ಭಾಗವಾಗಿವೆ. ಹಾಗೂ ಜೀವನದ ಅವಿಭಾಜ್ಯ ಅಂಗ ಮತ್ತು ಅದನ್ನು ಅನುಸರಿಸುವ ಹಕ್ಕು ಸಹ ಅವರಿಗೆ ಇದೆ. ಪ್ರಭುತ್ವ ತಾನಾಗಲಿ, ಇತರೆ ಸಂಸ್ಥೆ ಮತ್ತು ವ್ಯಕ್ತಿಗಳಾಗಲಿ ಒಬ್ಬ ರಿಲಿಜನ್ ವ್ಯಕ್ತಿಯ ವೈಯಕ್ತಿಕ ಕಾನೂನುಗಳಿಗೆ ತೊಂದರೆ ಕೊಡುವ ಮತ್ತು ಜನರ ಜೀವನದ ಮಾರ್ಗಗಳಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು. ಏಕೆಂದರೆ ಸಾವಿರಾರು ವರ್ಷಗಳಿಂದ ವೈಯಕ್ತಿಕ ಕಾನೂನುಗಳ ಆಧಾರದ ಮೇಲೆ ಬದುಕು ನಡೆಸುವ ವಿಧಾನದಲ್ಲಿ ಪ್ರಭುತ್ವವು ಮಧ್ಯಪ್ರವೇಶ ಮತ್ತು ಹಸ್ತಕ್ಷೇಪ ಮಾಡಬಾರದು. ಸಕ್ಯುಲರ್ ಪ್ರಭುತ್ವದ ಅಡಿಯಲ್ಲಿ ಸಮಾಜದ ಎಲ್ಲ ವ್ಯಕ್ತಿಗಳು ಸಮಾನ ನಾಗರೀಕ ಹಕ್ಕು ಮತ್ತು ಕಾನೂನುಗಳನ್ನು ಅನುಸರಿಸಬೇಕು ಎಂಬುದು ಸೆಕ್ಯುಲರಿಸಂ ಆಗಿದ್ದರೆ ಅದು ತಪ್ಪು. ಏಕೆಂದರೆ ಯಾವಾಗಲು ಸೆಕ್ಯುಲರ್ ಪ್ರಭುತ್ವ ಒಂದು ರಿಲಿಜನ್ಗೆ ಸೇರಿದ ಜನರಿಗೆ ತಮ್ಮದೇ ಆದ ರಿಲಿಜನನ್ನು ಅನುಸರಣೆ ಮಾಡುವ ಹಕ್ಕನ್ನು ಕೊಡಬೇಕು ಮತ್ತು ತಮ್ಮದೇ ಆದ ಜೀವನ ವಿಧಾನವನ್ನು ಅನುಸರಿಸಲು ಅವಕಾಶ ಕೊಡಬೇಕು. ಪ್ರತಿಯೊಂದು ರಿಲಿಜನ್ಗಳಿಗೆ ವೈಯಕ್ತಿಕ ಕಾನೂನುಗಳಿವೆ ಅದನ್ನು ಅನುಮೋದಿಸಬೇಕು. ಅದೇ ನಿಜವಾದ ಸೆಕ್ಯುಲರ್ ಸ್ಟೇಟ್ನ ಪ್ರಮುಖ ಗುರಿಯಾಗಿದೆ. ಸಮಾನ ನಾಗರೀಕ ಸಂಹಿತೆ ವೈಯಕ್ತಿಕ ಕಾನೂನುಗಳಿಗೆ ಅಡ್ಡ ಬಂದರೆ ಅದು ಸೆಕ್ಯುಲರಿಸಂ ರಾಷ್ಟ್ರವಾಗಲು ಸಾಧ್ಯವಿಲ್ಲ.
ಹಾಗೆಯೇ ಈ ಚರ್ಚೆ ಮುಂದುವರಿದು ಎಲ್ಲ ಜನರಿಗೆ ಸಮಾನ ನಾಗರೀಕ ಕಾನೂನು ಇರಬೇಕು ಎಂಬುವುದು ಒಂದು ಲಿಬರಲ್ ಸ್ಟೇಟ್ನ ಪ್ರಮುಖ ಲಕ್ಷಣವಾಗಿರಬಹುದು. ಪಶ್ಚಿಮದಲ್ಲಿ ಎಲ್ಲಾ ಸೆಕ್ಯುಲರ್ ರಾಷ್ಟ್ರಗಳಲ್ಲಿ ಸಮಾನ ನಾಗರೀಕ ಕಾನೂನಿನ ವ್ಯವಸ್ಥೆಯಿರಬಹುದು. ಆದರೆ ಭಾರತದ ಸಂದರ್ಭದಲ್ಲಿ ಪ್ರಭುತ್ವ ಜನರ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ತತ್ವವನ್ನು ಒಪ್ಪಿಕೊಂಡರೆ ಸಮಾನ ನಾಗರೀಕ ಕಾನೂನು ಅಸಾಧ್ಯವಾಗುತ್ತದೆ. ಎಲ್ಲಾ ಜನರು ಅಥವಾ ಯಾವುದೇ ಸಮುದಾಯದವರು ರಾಷ್ಟ್ರದ ಕಾನೂನುಗಳನ್ನು ಸಮಾನವಾಗಿ ಒಪ್ಪಿಕೊಳ್ಳಬೇಕು ಎಂಬ ಹೇಳಿಕೆ ಜನರ ಮೇಲೆ ಸರ್ವಾಧಿಕಾರತ್ವವನ್ನು ಹೇರುವಂತೆ ಆಗುತ್ತದೆ. ಈ ಮೂಲಕ ಜನರಿಗೆ ಇಷ್ಟವಿಲ್ಲದ ಕಾನೂನುಗಳನ್ನು ಹೇರುವಂತಿಲ್ಲ ಎಂಬುದು ಮುಸ್ಲಿಂ ಲೀಗ್ನ ವಾದವಾಗಿತ್ತು.
ಈ ವಾದವನ್ನು ತಿರಸ್ಕರಿಸುವ ಕೆ.ಎಮ್ ಮುನ್ಷಿಯವರ ಪ್ರಕಾರ ಪ್ರಸ್ತುತ ಎಲ್ಲಾ ಪ್ರಜಾಪ್ರಭುತ್ವ ಸರ್ಕಾರಗಳು ಸಮಾನ ನಾಗರೀಕ ಕಾನೂನು ಅಳವಡಿಸಿಕೊಂಡಿದೆ. ಅಲ್ಲಿ ಎಲ್ಲಿಯೂ ಸಹ ಸರ್ವಾಧಿಕಾರಿ ಧೋರಣೆಯೂ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ವೈಯಕ್ತಿಕ ಕಾನೂನು ರಿಲಿಜನ್ನಿನ ಭಾಗವಾಗಿದೆ ಎಂಬುದನ್ನು ಒಪ್ಪುವುದಿಲ್ಲ. ಮುನ್ಷಿಯವರು ಪ್ರಕಾರ ವೈಯಕ್ತಿಕ ಕಾನೂನು ಎಂಬುದಾಗಿ ಉಲ್ಲೇಖಿಸುತ್ತಿರುವ ಮದುವೆ, ವಿಚ್ಛೇದನ ಮತ್ತು ಕೌಟಂಬಿಕ ನಿರ್ವಹಣೆಯ ವಿಷಯಗಳು ರಿಲಿಜನ್ನಿನ ಭಾಗವಾಗಿರದೆ ರಿಲಿಜಿಯಸ್ ಚಟುವಟಿಕೆಗಳನ್ನು ಬಿಟ್ಟು ಉಳಿದ ವಿಷಯಗಳಿಗೆ ಸಂಬಂಧಪಟ್ಟಂತೆಪ್ರಭುತ್ವ ಕಾನೂನು ರೂಪಿಸಬೇಕಾಗುತ್ತದೆ. ಅಂದರೆ ಭೌತಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಾ ಸೆಕ್ಯುಲರ್. ಅದಕ್ಕೆ ಪ್ರಭುತ್ವ ಕಾನೂನು ರೂಪಿಸಬೇಕು ಎಂಬ ವಾದ ಮಂಡನೆಯಾಗುತ್ತದೆ.
ಇದಕ್ಕೆ ಉತ್ತರವಾಗಿ ಇಸ್ಮಾಯಲ್ರವರು ಪ್ರತಿಯೊಂದು ಸಮುದಾಯಕ್ಕೆ ಯಾವುದು ರಿಲಿಜನ್ ಮತ್ತು ಸೆಕ್ಯುಲರ್ ಆಚರಣೆಗಳು ಎಂಬುದು ಗೊತ್ತಿರುತ್ತದೆ. ಒಂದು ರಿಲಿಜನ್ನಿನಲ್ಲಿ ಒಬ್ಬ ವ್ಯಕ್ತಿಗೆ ಯಾವುದು ರಿಲಿಜನ್ ಆಚರಣೆಗಳು ಮತ್ತು ಯಾವುದು ಸೆಕ್ಯುಲರ್ ಆಚರಣೆಗಳು ಎಂದು ಗುರುತಿಸಿ ರಿಲಿಜನ್ ಆಚರಣೆಗಳನ್ನು ಆಚರಿಸಲು ಸಾಧ್ಯವಾಗುತ್ತದೆ. ಈ ರೀತಿ ಪ್ರಕ್ರಿಯೆ ಬೇರೆ ಬೇರೆ ರಿಲಿಜನ್ಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಈ ರೀತಿಯಾಗಿ ವಿಭಿನ್ನ ರಿಲಿಜನ್ಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಸೆಕ್ಯುಲರ್ ನೀತಿ ಮಾಡಲು ಸಾಧ್ಯವಿಲ್ಲ. ಉದಾ:- ನಮ್ಮ ರಿಲಿಜನ್ನಲ್ಲಿ ನಿಖಾ (ಮದುವೆ) ರಿಲಿಜಿಯಸ್ ಆಚರಣೆಯಾಗಿದ್ದರೆ ಬೇರೆ ರಿಲಿಜನ್ನಲ್ಲಿ ಅದು ಸೆಕ್ಯುಲರ್ ವಿಷಯಕ್ಕೆ ಬರುತ್ತದೆ. ಹೀಗಿರುವಾಗ ಸಮಾನ ನಾಗರೀಕ ಕಾನೂನನ್ನು ಅಳವಡಿಸಿಕೊಳ್ಳಲು ಹೇಗೆ ಸಾಧ್ಯ. ಆದ್ದರಿಂದ ಪ್ರತಿಯೊಂದು ರಿಲಿಜಿನ್ನಿನ ವೈಯಕ್ತಿಕ ಕಾನೂನುಗಳಿಗೆ ಮಾನ್ಯತೆ ಕೊಡಬೇಕು. ಈ ರೀತಿಯ ವಾದವನ್ನು ಮಂಡಿಸುವ ಮಹಮದ ಇಸ್ಮಾಯಿಲ್ರವರು ಸಂವಿಧಾನದ ವಿಧಿ ೩೫ರಲ್ಲಿ “ಭಾರತದ ಭೂಪ್ರದೇಶದಾದ್ಯಂತ ಇರುವ ನಾಗರೀಕರಿಗೆ ಏಕರೂಪ ನಾಗರೀಕ ಸಂಹಿತೆಯನ್ನು ಖಾತರಿಪಡಿಸಲು ಪ್ರಭುತ್ವವು ಪ್ರಯತ್ನಿಸುತ್ತದೆ ಮತ್ತು ಅದರಲ್ಲಿ ವೈಯಕ್ತಿಕ ಕಾನೂನು ಸಹ ಒಳಗೊಂಡಿರುತ್ತದೆ” ಎನ್ನುವ ತಿದ್ದುಪಡಿಯನ್ನು ಮಂಡಿಸುತ್ತಾರೆ.
ಈ ಹಂತದಲ್ಲಿ ಚರ್ಚೆಯಲ್ಲಿ ಪ್ರವೇಶಿಸುವ ಅಂಬೇಡ್ಕರ ಮುಸ್ಲಿಂಲೀಗ್ನ ವೈಯಕ್ತಿಕ ಕಾನೂನಿನ ಪ್ರಸ್ತಾವವನ್ನು ತಿರಸ್ಕರಿಸುತ್ತಾರೆ. ಕೆ.ಎಂ. ಮುನ್ಷಿ ಮತ್ತಿತರರು ಏಕರೂಪ ನಾಗರೀಕ ಸಂಹಿತೆಯ ಪರವಾದ ಚರ್ಚೆಯನ್ನು ಪುರಸ್ಕರಿಸುತ್ತಾ ಈಗಾಗಲೇ ಈ ದೇಶದಲ್ಲಿ ಮಾನವ ಸಂಬಂಧಗಳ ಎಲ್ಲಾ ಅಂಶಗಳನ್ನೂ ಒಳಗೊಂಡಂತೆ ಏಕರೂಪ ನಾಗರೀಕ ಸಂಹಿತೆ ಚಾಲ್ತಿಯಲ್ಲಿದೆ. ಈಗಾಗಲೇ ಏಕರೂಪ ಮತ್ತು ಪೂರ್ಣ ಅಪರಾಧ ಸಂಹಿತ ಅಸ್ತಿತ್ವದಲ್ಲಿದೆ, ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಆಸ್ತಿ ವರ್ಗಾವಣೆಯ ಕಾನೂನಿದೆ. ಮದುವೆ ಮತ್ತು ಉತ್ತರಾಧಿಕಾರ ಮಾತ್ರವೇ ಈ ನಾಗರೀಕ ಕಾನೂನಿಂದ ಇನ್ನೂ ಹೊರಗುಳಿದಿದೆ. ಇದರ ಹೊರತಾಗಿ ಈಗಾಗಲೇ ಏಕರೂಪ ನಾಗರೀಕ ಕಾನೂನುಗಳೇ ಇವೆ. ಹೀಗಿರುವಾಗ ಈಗ ಏಕರೂಪ ನಾಗರೀಕ ಸಂಹಿತೆಗೆ ತಿದ್ದುಪಡಿ ಸೂಚಿಸಿ ವೈಯಕ್ತಿಕ ಕಾನೂನಿನ ಬೇಡಿಕೆ ಇಡುತ್ತಿರುವುದೇ ಆಶ್ಚರ್ಯದ ವಿಚಾರ. ಹಿಂದಿನಿಂದಲೂ ವೈಯಕ್ತಿಕ ಕಾನೂನನ್ನು ಅನುಸರಿಸುವ ಬಗ್ಗೆ ಮಾತನಾಡಿದವರು ಮರೆತಿರುವುದೇನೆಂದರೆ ವಾಯವ್ಯ (ಮುಸ್ಲಿಂ ಬಾಹುಳ್ಯದ) ಪ್ರಾಂತ್ಯವೂ ಸಹ ೧೯೩೫ರವರೆಗೆ ಷರಿಯಾ ಕಾನೂನಿಗೆ ಒಳಪಟ್ಟಿರಲಿಲ್ಲ. ಅಲ್ಲಿ ಉತ್ತಾರಧಿಕಾರತ್ವ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದೂ ಕಾನೂನನ್ನೇ ಅನುಸರಿಸಲಾಗುತ್ತಿತ್ತು. ೧೯೩೯ರಲ್ಲಿ ಕೇಂದ್ರಶಾಸಕಾಂಗವು ಮಧ್ಯಪ್ರವೇಶಿಸಿ ಷರಿಯಾ ಕಾನೂನನ್ನು ಅನ್ವಯಿಸಲು ಹಿಂದೂ ಕಾನೂನು ಅನ್ವಯವನ್ನು ನಿಲ್ಲಿಸಿತು. ಅಷ್ಟು ಮಾತ್ರವಲ್ಲ, ೧೯೩೭ರವರೆಗೂ ವಾಯವ್ಯ ಪ್ರಾಂತ್ಯ ಮಾತ್ರವೇ ಅಲ್ಲದೆ ಭಾರತದ ಇತರೆಡೆ ಕೂಡ ಸಂಯುಕ್ತ ಪ್ರಾಂತ್ಯ, ಕೇಂದ್ರ ಪ್ರಾಂತ್ಯ, ಬಾಂಬೆ ಪ್ರಾಂತ್ಯ ಬಹಳಷ್ಟು ಮಟ್ಟಿಗೆ ಮುಸ್ಲಿಮರು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಹಿಂದೂ ಕಾನೂನಿನ ಆಳ್ವಿಕೆಗೆ ಒಳಪಟ್ಟಿದ್ದರು. ಅವರನ್ನೂ ಇತರ ಮುಸ್ಲಿಮರೊಟ್ಟಿಗೆ ಷರಿಯಾವನ್ನು ಅನುಸರಿಸುವಂತೆ ಮಾಡಲು ೧೯೩೭ರಲ್ಲಿ ಶಾಸಕಾಂಗವು ಮದ್ಯಪ್ರವೇಶಿಸಿ ಶಾಸನ ಮಾಡಲಾಯಿತು. ಉತ್ತರ ಮಲಬಾರ್ ಪ್ರದೇಶದಲ್ಲಿ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಮರಿಗೂ ಮರುಮಕ್ಕತಯಮ್ ಕಾನೂನೇ ಅನ್ವಯವಾಗುತ್ತಿತ್ತು. ಹಾಗಾಗಿ ಪುರಾತನ ಕಾಲದಿಂದಲೂ ಮುಸ್ಲಿಮರು ವೈಯಕ್ತಿಕ ಕಾನೂನನ್ನೇ ಅನುಸರಿಸುತ್ತಿದ್ದು, ಏಕರೂಪ ನಾಗರೀಕ ಸಂಹಿತೆ ಅವರ ಆ ರಿಲಿಜನ್ನಿನ ಸ್ವಾತಂತ್ರ್ಯಕ್ಕೆ ಧಕ್ಕೆ ಎನ್ನುವುದು ಅವಾಸ್ತವ.
ಅಂಬೇಡ್ಕರ್ರ ಮತ್ತೊಂದು ವಾದವೆಂದರೆ ಪ್ರಭುತ್ವವು ತನ್ನ ಎಲ್ಲಾ ನಾಗರೀಕರಿಗೆ ಏಕರೂಪ ನಾಗರೀಕ ಸಂಹಿತೆ ರೂಪಿಸಿದರೆ ನಾಗರೀಕರೆಲ್ಲರ ಮೇಲೂ ಏಕಪಕ್ಷೀಯವಾಗಿ ಹೇರುತ್ತದೆ ಎಂದೇನೂ ಅರ್ಥವಲ್ಲ. ಯಾರು ಅದನ್ನು ಒಪ್ಪಲು ಸಿದ್ದರಿರುವುದಾಗಿ ಘೋಷಿಸುತ್ತಾರೋ ಅವರಿಗೆ ಮಾತ್ರವೇ ಅನ್ವಯವಾಗುವಂತೆ ಶಾಸನ ಮಾಡುವ ಅವಕಾಶವಂತೂ ಭವಿಷ್ಯತ್ತಿನಲ್ಲಿ ಸಂಸತ್ತಿಗೆ ಇದ್ದೇ ಇದೆ. ಈ ಸಂಹಿತೆಯ ಅನ್ವಯವು ಆರಂಭದಲ್ಲಿ ಸ್ವಯಂ ಇಚ್ಚೆಯದ್ದಾಗಿರುತ್ತದೆ. ೧೯೩೭ರಲ್ಲಿ ಷರಿಯಾ ಕಾಯ್ದೆಯಲ್ಲೂ ಸಹ ಇದೇ ರೀತಿಯ ಅವಕಾಶವನ್ನು ಕಲ್ಪಿಸಿ ವಾಯವ್ಯ ಪ್ರಾಂತ್ಯವನ್ನು ಹೊರತುಪಡಿಸಿ ಇತರೆಡೆ ಅನ್ವಯ ಮಾಡಲು ಷರಿಯಾವನ್ನು ಅನುಸರಿಸಲು ಇಚ್ಚಿಸುವವರು ಪ್ರಭುತ್ವದ ಅಧಿಕಾರಿಯ ಮುಂದೆ ಹೋಗಿ ಸ್ವಯಂ ಇಚ್ಚೆಯಿಂದ ಲಿಖಿತ ಘೋಷಣೆಯನ್ನು ಮಾಡಿದ ಮೇಲೆ ಷರಿಯವನ್ನು ಆತನಿಗೆ ಮತ್ತು ಆತನ ಉತ್ತರಾಧಿಕಾರಿಗಳಿಗೆ ಅನ್ವಯಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಏಕರೂಪ ನಾಗರೀಕ ಸಂಹಿತೆಗೂ ಅದೇ ರೀತಿಯ ಅವಕಾಶ ಇದ್ದೇ ಇರುತ್ತದೆ. ಇಚ್ಚೆ ಇದ್ದವರು ಏಕರೂಪ ನಾಗರೀಕ ಸಂಹಿತೆ ಅನುಸರಿಸಲಿ ಇಲ್ಲದವರು ಅವರ ವೈಯಕ್ತಿಕ ಕಾನೂನನ್ನೇ ಅನುಸರಿಸಲಿ ಎನ್ನುತ್ತಾರೆ. ಇದರ ಜೊತೆಗೆ ಅವರ ವಾದವೇನೆಂದರೆ ಈ ದೇಶದಲ್ಲಿ ಹುಟ್ಟಿನಿಂದ ಸಾವಿನವರೆಗೂ ಜನರ ಜೀವನದ ಎಲ್ಲಾ ವಿಚಾರವು ಬಹುತೇಕ ರಿಲಿಜನ್ನಿನ ಪರಿಕಲ್ಪನೆಗಳೇ ವ್ಯಾಪಿಸಿಕೊಂಡಿವೆ. ಇಲ್ಲಿ ರಿಲಿಜನ್ನೇತರವಾಗಿರುವ ಅಂಶಗಳೇ ಕಾಣುವುದಿಲ್ಲ. ಹಾಗಾಗಿ ವೈಯಕ್ತಿಕ ಕಾನೂನ್ನು ಉಳಿಸಿಕೊಂಡರೆ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಭುತ್ವವು ಯಾವುದೇ ಕಾನೂನು ಮಾಡದೆ ನಿಷ್ಕ್ರಿಯವಾಗಿರಬೇಕಾಗುತ್ತದೆ. ಜೀವನದ ಪ್ರತಿಯೊಂದು ಅಂಶವನ್ನೂ ನಿರ್ಣಯಿಸುವಷ್ಟು ವ್ಯಾಪ್ತಿಯನ್ನು ರಿಲಿಜನ್ನಿಗೆ ನೀಡಬೇಕಿಲ್ಲ. ಯೂರೋಪಿನಲ್ಲೂ ಕ್ರಿಶ್ಚಿಯಾನಿಟಿ ಮತ್ತದರ ವೈಯಕ್ತಿಕ ಕಾನೂನಿಗಳಿವೆ ಅಂದಮಾತ್ರಕ್ಕೆ ಜಗತ್ತಿನೆಲ್ಲಡೆ ಮತ್ತು ಯುರೋಪಿನ ಯಾವುದೇ ಭಾಗದಲ್ಲೂ ಎಲ್ಲರೂ ಅವರ ವೈಯಕ್ತಿ ಕಾನೂನನ್ನೇ ಅನುಸರಿಸುತ್ತಿಲ್ಲ. ಅಂತದ್ದು ಅಸ್ತಿತ್ವದಲ್ಲೇ ಇಲ್ಲ. ಹಾಗಾಗಿ ರಿಲಿಜನ್ನಿನ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಭುತ್ವದ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವುದು ಸಾಧ್ಯವಿಲ್ಲ ಎಂದು ವಾದಿಸುತ್ತಾರೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಕಾನೂನಿಗೆ ಮಾನ್ಯತೆ ನೀಡಬೇಕು ಎನ್ನುವ ತಿದ್ದುಪಡಿಯನ್ನು ಸಂವಿಧಾನ ರಚನಾ ಸಭೆಯು ತಿರಸ್ಕರಿಸುತ್ತದೆ.
ಸ್ವತಂತ್ರ ಭಾರತದಲ್ಲಿ….
ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಸಂವಿಧಾನ ಬದ್ದಗೊಳಿಸುವ ಮುಸ್ಲಿಂ ಲೀಗಿನ ಪ್ರಯತ್ನ ವಿಫಲವಾಗುತ್ತದೆ ಮತ್ತು ಏಕರೂಪ ನಾಗರೀಕ ಸಂಹಿತೆಗೆ ಮನ್ನಣೆ ದೊರೆಯುತ್ತದೆ. ಆದರೆ ಸ್ವತಂತ್ರ ಭಾರತದಲ್ಲಿ ಸಂವಿಧಾನ ರಚನಾ ಸಭೆಯ ಈ ನಿಲುವಿಗೆ ವ್ಯತಿರಿಕ್ತವಾಗಿ ಭಾರತೀಯ ಮುಸ್ಲಿಮರೆಲ್ಲರನ್ನೂ ಕಡ್ಡಾಯವಾಗಿ ಷರಿಯಾ ಕಾಯ್ದೆಯಡಿ ತರುವ ಪ್ರಯತ್ನ ಮುಂದುವರೆಯಿತು. ಅದರ ಫಲವಾಗಿ ೧೯೩೭ರ ಷರಿಯಾ ಕಾಯ್ದೆಯಲ್ಲಿ ನೀಡಲಾಗಿದ್ದ ಷರಿಯಾ ಅಥವಾ ಸ್ಥಳೀಯ ಪದ್ದತಿಗಳನ್ನು ಅನುಸರಿಸುವ ಆಯ್ಕೆಯ ಅವಕಾಶಗಳನ್ನೂ ಸಹ ಕೈಬಿಡಲಾಯಿತು. ಹಿಂದಿನ ಈ ಷರಿಯಾ ಕಾಯ್ದೆಗಳು ಯಾವ ಯಾವ ಪ್ರಾಂತ್ಯಗಳಲ್ಲಿ ಮತ್ತು ಪ್ರದೇಶಗಳಲ್ಲಿ ಮುಸ್ಲಿಮರಿಗೆ ಅನ್ವಯವಾಗುತ್ತಿರಲಿಲ್ಲವೋ ಅಲ್ಲೆಲ್ಲಾ ಷರಿಯಾವನ್ನೇ ಮುಸ್ಲಿಮರು ಅನುಸರಿಸುವುದನ್ನು ಕಡ್ಡಾಯಗೊಳಿಸಿ ಅನ್ವಯಿಸಲಾಯಿತು. ಅದರಲ್ಲೂ ಮುಖ್ಯವಾಗಿ ೧೯೪೭ರ ನಂತರ ಭಾರತದೊಂದಿಗೆ ವಿಲೀನಗೊಂಡ ಎಲ್ಲಾ ಸಂಸ್ಥಾನಗಳಲ್ಲೂ ಅದನ್ನು ಅನುಸರಿಸುವಂತೆ ಮಾಡಲಾಯಿತು. ಅವುಗಳಲ್ಲಿ ಇತ್ತೀಚೆನದು ೧೯೮೦ರಲ್ಲಿ ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಸರ್ಕಾರವು ತನ್ನ ಕಾಯ್ದೆಯ ಮೂಲಕ ಕೂಚ್ ಬಿಹಾರ್ನ ಮುಸ್ಲಿಮರು ಅನುಸರಿಸುತ್ತಿದ್ದ ಸ್ಥಳೀಯ ಆಚರಣೆಗಳನ್ನು ನಿಲ್ಲಿಸಿ ಅದರ ಬದಲಿಗೆ ಷರಿಯಾವನ್ನೆ ಪಾಲಿಸುವಂತೆ ಮಾಡಲಾಯಿತು. ಅಲ್ಲಿಗೆ ಭಾರತೀಯ ಮುಸ್ಲಿಮರು ಎಲ್ಲರೂ, ಇಚ್ಚೆ ಇದ್ದರೂ ಇಲ್ಲದಿದ್ದರೂ, ಕಡ್ಡಾಯವಾಗಿ ಷರಿಯಾವನ್ನೇ ಅನುಸರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು ಅದೂ ಪ್ರಭುತ್ವದ ಕಾಯ್ದೆಗಳ ಮೂಲಕ.
ಹೀಗೆ ಧಾರ್ಮಿಕ ಅಲ್ಪಸಂಖ್ಯಾತರ ರಿಲಿಜನ್ನಿನ ಸ್ವಾತಂತ್ರ್ಯದ ಮೇಲಿನ ಮೂಲಭೂತ ದಬ್ಬಾಳಿಕೆ ಮತ್ತು ಅವರ ಸಾಂಸ್ಕೃತಿಕ ಅಸ್ಮಿತತೆಯ ಮೇಲಿನ ದಾಳಿ ಎನ್ನುವ ವಾದದ ಆಧಾರದ ಮೇಲೆ ಏಕರೂಪ ನಾಗರೀಕ ಸಂಹಿತೆಯ ಕಲ್ಪನೆಯನ್ನೇ ಪ್ರತಿರೋಧಿಸಿದರೂ ಸಹ, ಮುಸ್ಲಿಂ ನಾಯಕತ್ವವು ಅವರ ರಿಲಿಜನ್ನಿನ ವಿಷಯದಲ್ಲಿ ಪ್ರಭುತ್ವದ ಮಧ್ಯಪ್ರವೇಶವನ್ನು ಸಂಪೂರ್ಣವಾಗಿ ಹತ್ತಿಕ್ಕಲ್ಲಿಲ್ಲ. ವಾಸ್ತವವಾಗಿ ಪ್ರಭುತ್ವದ ಶಾಸನೀಯ ಅಧಿಕಾರದ ಮಧ್ಯಪ್ರವೇಶವನ್ನು ಮಾಡಿಸಿಯೇ (ಮಾಡುವಂತೆ ಒತ್ತಾಯಿಸಿ) ಮುಸ್ಲಿಮರೆಲ್ಲರೂ ಷರಿಯತ್ ಅಥವಾ ವೈಯಕ್ತಿಕ ಕಾನೂನನ್ನು ಭಾರತದ ಎಲ್ಲಾ ಮುಸ್ಲಿಮರೂ ಅನುಸರಿಸುವಂತೆ ಮುಸ್ಲಿಂ ನಾಯಕತ್ವವು ನೋಡಿಕೊಂಡಿತು. ಹಿಂದೂ ವೈಯಕ್ತಿಕ ಕಾನೂನಿನ ಸುಧಾರಣೆಯಲ್ಲೂ ಪ್ರಭುತ್ವದ ಹಸ್ತಕ್ಷೇಪ ಮಾಡಿದರೂ ಅಲ್ಲಿ ಅವರ ಸಂಪ್ರದಾಯ/ಧಾರ್ಮಿಕ ನಂಬಿಕೆಗಳನ್ನು ಬಿಟ್ಟುಕೊಟ್ಟು ವೈಚಾರಿಕ ನೆಲೆಗಟ್ಟಿನ ಸಾರ್ವತ್ರಿಕ ವೈಯಕ್ತಿಕ ಕಾನೂನುಗಳನ್ನು ರೂಪಿಸಲಾಯಿತು. ಆದರೆ ಮುಸ್ಲಿಮರು ಅವರ ಸ್ಥಳೀಯ ಸಾಂಪ್ರದಾಯಿಕ ಮತ್ತು ರೂಢಿಪದ್ದತಿಗಳನ್ನು ಬಿಟ್ಟುಕೊಟ್ಟು ಷರಿಯತ್ ಅಥವಾ ಸಾರ್ವತ್ರಿಕವಾಗಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಸ್ವೀಕರಿಸುವಂತೆ ಮಾಡಲಾಯಿತು.
ಇಲ್ಲಿ ಬಹುಮುಖ್ಯವಾಗಿ ಇನ್ನೊಂದು ಅಂಶವನ್ನು ಗುರುತಿಸಬೇಕು. ರಿಲಿಜನ್ನಿನ ಸ್ವಾತಂತ್ರ್ಯ ವ್ಯಕ್ತಿಯ ವೈಯಕ್ತಿಕ ಆಯ್ಕೆ ಎನ್ನುವುದೇ ಉದಾರವಾದಿ ಸೆಕ್ಯುಲರ್ತತ್ವ ಮತ್ತು ಅದೇ ಸಂವಿಧಾನದ ನೀತಿಯೂ ಸಹ. ಆದರೆ ಭಾರತೀಯ ಮುಸ್ಲಿಮರಿಗೆ ಇದು ವೈಯಕ್ತಿಕ ಆಯ್ಕೆಯಾಗಿ ಲಭ್ಯವಿಲ್ಲ. ಅವರು ಮುಸ್ಲಿಮರಾಗಿದ್ದಾರೆ ಹಾಗಾಗಿ ಅವರು ಷರಿಯವನ್ನೇ ಅನುಸರಿಸಬೇಕು, ಅಷ್ಟೆ. ಮುಸ್ಲಿಮನಾಗಿ ತನ್ನ ರಿಲಿಜನ್ನಿನ ಡಾಕ್ಟ್ರಿನ್ನುಗಳನ್ನು ಅನುಸರಿಸುವ ಅನುಸರಿಸದಿರುವ ಅಥವಾ ಇಚ್ಚೆ ಇದ್ದರೆ ಸ್ಥಳೀಯ ರೂಢಿಪದ್ದತಿಗಳನ್ನಾಗಲೀ ಅಥವಾ ಸೆಕ್ಯುಲರ್ ನಾಗರೀಕ ಕಾನೂನುಗಳನ್ನು ಅನುಸರಿಸುವ ಆಯ್ಕೆಯನ್ನೇ ಆತ/ಕೆ ಹೊಂದಿಲ್ಲ. ಅಂದಮೇಲೆ ಇಲ್ಲಿ ರಿಲಿಜನ್ನಿನ ಸ್ವಾತಂತ್ರ್ಯವನ್ನು ವ್ಯಕ್ತಿಗೆ ಅಥವಾ ನಾಗರೀಕನಿಗೆ ನೀಡಿಲ್ಲ ಅದನ್ನು ಸಮುದಾಯಕ್ಕೆ/ಸಂಘಟನೆಗಳಿಗೆ ನೀಡಲಾಗಿದೆ. ಆ ಮೂಲಕ ಅವನ ವೈಯಕ್ತಿಕವಾದ ರಿಲಿಜನ್ನಿನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಬಹುಸಂಖ್ಯಾತ ಹಿಂದೂಗಳ ಮೇಲೆ ಆಧುನಿಕರಣ ಮತ್ತು ಸುಧಾರಣೆ ಹೆಸರಿನಲ್ಲಿ ಸೆಕ್ಯುಲರ್ ಕಾನೂನುಗಳನ್ನು ಹೇರಿದ ಪ್ರಭುತ್ವವು ಮುಸ್ಲಿಮರ ವಿಷಯದಲ್ಲಿ (ಸ್ಥಳೀಯ ಮುಸ್ಲಿಮರಿಗೆ ಅನಪೇಕ್ಷಿತವಾಗಿದ್ದರೂ/ ಇಷ್ಟವಿಲ್ಲದಿದ್ದರೂ ಮುಸ್ಲಿಂ ಸಂಘಟನೆಗಳ ಒತ್ತಾಯದ ಮೇರೆಗೆ) ಇಸ್ಲಾಂ ರಿಲಿಜನ್ನಿನ ಕಾನೂನುಗಳನ್ನು ಅವರ ಮೇಲೆ ಹೇರಿತು. ಇದು ಭಾರತೀಯರ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ ೧೯೪೭ರ ನಂತರದ ಸೆಕ್ಯುಲರ್ ಪ್ರಭುತ್ವದ ವರ್ತನೆಯಲ್ಲಿನ ಮೂಲಭೂತ ವ್ಯತ್ಯಾಸ. ಒಂದೆಡೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವೈಯಕ್ತಿಕ ಕಾನೂನಿನ ವಿಷಯದಲ್ಲಿ ಸಾರ್ವತ್ರಿಕ ವೈಚಾರಿಕ ಸೆಕ್ಯುಲರ್ ಕಾನೂನುಗಳನ್ನು ಮಾಡುವ ಯಾವ ಅವಕಾಶವನ್ನು ಮುಸ್ಲೀಮ್ ಸಂಘಟನೆಗಳು ಮತ್ತು ಸೆಕ್ಯುಲರ್ವಾದಿಗಳು ಪ್ರಭುತ್ವಕ್ಕೆ ನೀಡಲಿಲ್ಲ, ಅಥವಾ ಪ್ರಭುತ್ವವೇ ಮಾಡಲಿಲ್ಲ. ಮತ್ತೊಂದೆಡೆ ಬಹುಸಂಖ್ಯಾತ ಹಿಂದೂಗಳ ನಂಬಿಕೆ ಆಚರಣೆಗಳೂ ಸೇರಿದಂತೆ ಅವರ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಸುಧಾರಣ ಕಾಯ್ದೆಗಳ ಮೇಲೆ ಕಾಯ್ದೆಗಳನ್ನು ಸೆಕ್ಯುಲರ್ ಪ್ರಭುತ್ವ ಮಾಡುತ್ತಲೇ ಬರುತ್ತಿದೆ. ಅಲ್ಲಿಗೆ ಭಾರತೀಯ ಪ್ರಭುತ್ವವು ರಿಲಿಜನ್ನಿನ ಸ್ವಾತಂತ್ರ್ಯ, ಸಮಾನತೆ, ತಾಟಸ್ಥ್ಯ ಮತ್ತು ಸಹಿಷ್ಣತೆ ಎನ್ನುವ ಎಲ್ಲಾ ಸೆಕ್ಯುಲರ್ ತತ್ವಗಳಿಗೂ ತಿಲಾಂಜಲಿಯನ್ನು ಇಟ್ಟಿದೆ.
References:
1.Chatterjee, Partha. 1998. “Secularism and Tolerance.” In: Secularism and Its Critics, Rajeev Bhargava. New Delhi: Oxford University Press. Pp. 345-379.
2. Rochana Bajpai, 2002. “The conceptual vocabularies of secularism and minority rights in India”Journal of Political Ideologies (2002), 7(2), 179–197.
3. Roover, Jakob D. Europe, India, and the Limits of Secularism (Religion and Democracy).London:Oxford University Press.
4. ಬಾಲಗಂಗಾಧರ, ಎಸ್. ಎನ್., ೨೦೧೦. ಸೆಕ್ಯುಲರ್ ಪ್ರಭುತ್ವ ಮತ್ತು ರಿಲಿಜಿಯಸ್ ಸಂಘರ್ಷ ಲಿಬರಲ್ ನಿರ್ಲಿಪ್ತತೆ ಮತ್ತು ಭಾರತೀಯ ಬಹುಸಂಸ್ಕೃತಿಗಳು” (೨೨೯-೨೩೧). ಪೂರ್ವಾವಲೋಕನ. (ಸಂ). ಜೆ. ಎಸ್. ಸದಾನಂದ ಮತ್ತು ರಾಜಾರಾಮ ಹೆಗ್ಡೆ. ಬೆಂಗಳೂರು: ಅಭಿನವ ಪ್ರಕಾಶನ.
5. ಬಾಲಗಂಗಾಧರ, ಎಸ್. ಎನ್., ೨೦೧೦. ಸೆಕ್ಯುಲರಿಸಂನ ಕರಿನೆರಳು-ಭಾರತದಲ್ಲಿ ಹಿಂದೂ ಮೂಲಭೂತವಾದ ಮತ್ತು ವಸಾಹತುಶಾಹೀ ಉದಾರವಾದ. ಪೂರ್ವಾವಲೋಕನ. (ಸಂ). ಜೆ. ಎಸ್. ಸದಾನಂದ ಮತ್ತು ರಾಜಾರಾಮ
ಹೆಗ್ಡೆ. ಬೆಂಗಳೂರು: ಅಭಿನವ ಪ್ರಕಾಶನ.